ಧಾರವಾಡ/ಹುಬ್ಬಳ್ಳಿ: ಮುಪ್ಪಿನ ಕಾಲದಲ್ಲಿ ಹತ್ತವರನ್ನು ದೂರಮಾಡುವ ಇಂದಿನ ಸಮಾಜದಲ್ಲಿ ಹಿರಿಯ ನಾಗರಿಕರ ಸೇವೆಗಾಗಿ ಜೀವನವನ್ನ ಮುಡುಪಿಟ್ಟ ದಂಪತಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ.
ಹುಬ್ಬಳ್ಳಿಯ ಜಯನಗದ ನಿವಾಸಿಗಳಾದ ಜ್ಯೋತಿ ಮತ್ತು ತುಳಸಿದಾಸ್ ನಾಯಕ್ ದಂಪತಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಜ್ಯೋತಿ ನಾಯಕ್ ವೃತ್ತಿಯಲ್ಲಿ ಏವಿಯೇಷನ್ ಇಂಜಿನಿಯರ್. ಏಳು ವರ್ಷಗಳ ಹಿಂದೆ ಕೆಲಸಕ್ಕೆ ರಾಜೀನಾಮೆ ನೀಡಿ ಹುಬ್ಬಳ್ಳಿಗೆ ಬಂದು ನಲೆಸಿದ್ದಾರೆ. ತುಳಿಸಿದಾಸ್ ಅವರು ಔಷಧಿ ಮಾರಾಟಗಾರರು. ಬೆಂಗಳೂರು ತೊರೆದು ಇಲ್ಲಿಗೆ ಬಂದ ಬಳಿಕ ವೃದ್ಧರ ಹಗಲು ತಂಗುದಾಣ ತೆರೆದಿದ್ದಾರೆ. ಸುಮಾರು 25 ಕ್ಕೂ ಹೆಚ್ಚು ವೃದ್ಧರು ಪ್ರತಿನಿತ್ಯ ಇಲ್ಲಿಗೆ ಬರುತ್ತಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ವಯೋವೃದ್ಧರಿಗೆ ಇಲ್ಲಿರಲು ಅವಕಾಶ ಕಲ್ಪಿಸಲಾಗಿದೆ.
ಮಕ್ಕಳು ಕೆಲಸಕ್ಕೆ ಹೊರಡುವ ಮುನ್ನ ತಮ್ಮ ಪೋಷಕರನ್ನು ಇಲ್ಲಿ ಕರೆ ತರುತ್ತಾರೆ. ನಂತರ ಸಂಜೆ ವಾಪಾಸ್ ಕರೆದುಕೊಂಡು ಹೋಗುತ್ತಾರೆ. 25ಕ್ಕೂ ಹೆಚ್ಚು ಜನ ಇಲ್ಲಿ ನೆಮ್ಮದಿಯ ಜೀವನ ಕಂಡುಕೊಂಡಿದ್ದರೆ, ಕೆಲವರು ಶಾಶ್ವತ ಆಶ್ರಯ ಪಡೆದುಕೊಂಡಿದ್ದಾರೆ.
ಹಗಲು ತಂಗುದಾಣ ನಡೆಸುತ್ತಾರೆ ಎಂದ ಮಾತ್ರಕ್ಕೆ ಅವರು ವೃದ್ಧರನ್ನು ಇಲ್ಲಿ ತಂದು ಬಿಡಿ ಎನ್ನುವುದಿಲ್ಲ. ಬದಲಾಗಿ ಡೇ ಕೇರ್ ಗೆ ಪೋಷಕರನ್ನು ಕರೆ ತರುವ ಮಕ್ಕಳಿಗೆ ಕೌನ್ಸಿಲಿಂಗ್ ಮಾಡುವ ಮೂಲಕ ಅವರ ಹೆತ್ತವರ ಬಗ್ಗೆ ತಿಳಿ ಹೇಳಿತ್ತಾರೆ. ಕೌನ್ಸಿಲಿಂಗ್ ಮೂಲಕ ತಂದೆ ತಾಯಿಗಳನ್ನು ನೋಡಿಕೊಳ್ಳಲು ಪ್ರೇರಣೆ ನೀಡುತ್ತಾರೆ. ನಾಯಕ್ ದಂಪತಿ ಇಲ್ಲಿ ಬರುವ ವೃದ್ಧರಿಂದ ಹಣ ಪಡೆಯಲ್ಲ. ತಮ್ಮ ಹಣದಲ್ಲಿಯೇ ಹಿರಿಯ ಜೀವಗಳಿಗೆ ಬೆಳಗ್ಗೆ ಟೀ, ಉಪಹಾರ ನೀಡಿ ಹೆತ್ತವರ ಹಾಗೆ ಆರೈಕೆ ಮಾಡುತ್ತಾರೆ.