ಚಿಕ್ಕಮಗಳೂರು: ಕೊರೊನಾ ಒಂದು ಮತ್ತು ಎರಡನೇ ಅಲೆಯಲ್ಲಿ ಆದ ಸಮಸ್ಯೆ ಮೂರನೇ ಅಲೆಯಲ್ಲಿ ಆಗುವುದು ಬೇಡ ಎಂದು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಿಮಿಷಕ್ಕೆ 1000 ಲೀಟರ್ ಆಕ್ಸಿಜನ್ ಉತ್ಪಾದಿಸುವ ಪಿಎಸ್ಎ ಘಟಕವನ್ನ ನಿರ್ಮಿಸಲಾಗಿದೆ.
ಜಿಲ್ಲೆಯಲ್ಲಿ ಒಂದು ಮತ್ತು ಎರಡನೇ ಅಲೆಯಲ್ಲಿ ಸಾಕಷ್ಟು ಆಕ್ಸಿಜನ್ ಸಮಸ್ಯೆ ಎದುರಾಗಿತ್ತು. ಬಳ್ಳಾರಿಯ ಜಿಂದಾಲ್ ಸೇರಿದಂತೆ ಬೇರೆ-ಬೇರೆ ಕಡೆಯಿಂದ ಆಕ್ಸಿಜನ್ ತರಿಸಿಕೊಳ್ಳಬೇಕಿತ್ತು. ಅದು ಅಲ್ಲದೇ ಈ ವೇಳೆ ಕೊರೊನಾ ಉತ್ತುಂಗದ ಸ್ಥಿತಿಯಲ್ಲಿದ್ದಾಗಲೇ ಹಲವು ಬಾರಿ ಆಕ್ಸಿಜನ್ ಸಮಸ್ಯೆಯೂ ಎದುರಾಗಿತ್ತು. ತುರ್ತು ಸಂದರ್ಭದಲ್ಲಿ ಭದ್ರಾವತಿಯಿಂದಲೂ ಸಿಲಿಂಡರ್ ಮೂಲಕ ಆಕ್ಸಿಜನ್ ತರಿಸಿಕೊಂಡಿದ್ದ ಜಿಲ್ಲಾಡಳಿತ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿತ್ತು. ಇದನ್ನೂ ಓದಿ: ಕಳ್ಳರ ಗ್ಯಾಂಗ್ ಅರೆಸ್ಟ್ – 21 ಲಕ್ಷ ಮೌಲ್ಯದ ಶ್ರೀಗಂಧ ವಶ
ಈ ಬಾರಿ ಜಿಲ್ಲಾಡಳಿತ ಕೊರೊನಾ ಮೂರನೇ ಅಲೆ ಎದುರಿಸಲು ಸನ್ನದ್ಧವಾಗಿದ್ದು, ಎಲ್ಲ ಸೌಲಭ್ಯಗಳನ್ನ ಸಿದ್ಧತೆ ಮಾಡಿಕೊಂಡಿದೆ. 28 ಹೆಚ್ಚುವರಿ ಆಕ್ಸಿಜನ್ ಬೆಡ್, 250 ಆಕ್ಸಿಜನ್ ಬೆಡ್ ಗಳಿಗೆ ಪೈಪ್ ಲೈನ್ ವ್ಯವಸ್ಥೆ, 30 ಐಸಿಯು ಬೆಡ್, 10 ಮಕ್ಕಳ ಐಸಿಯು ಬೆಡ್ ಸೇರಿದಂತೆ ಕಡೂರು, ತರೀಕೆರೆ, ಮೂಡಿಗೆರೆಯಲ್ಲೂ ನಿಮಿಷಕ್ಕೆ 390 ಲೀಟರ್ ಆಕ್ಸಿಜನ್ ಉತ್ಪಾದನಾ ಘಟಕ, ಕೊಪ್ಪ, ಶೃಂಗೇರಿ ಹಾಗೂ ಎನ್.ಆರ್.ಪುರದಲ್ಲಿ ನಿಮಿಷಕ್ಕೆ 500 ಲೀಟರ್ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ.
ಕೊರೊನಾ ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಹೊಸ ಬೆಡ್ ಗಳಿಗೆ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಹೆಚ್ಚಿನ ಬೆಡ್ ಗಳ ಕೊಠಡಿಯನ್ನೇ ನಿರ್ಮಾಣ ಮಾಡುತ್ತಿದೆ. ಜಿಲ್ಲಾಸ್ಪತ್ರೆಯ ಆವರಣದಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಕೊರೊನಾ ಪರೀಕ್ಷೆಗೆ ಸರದಿ ಸಾಲಲ್ಲಿ ನಿಂತಿದ್ದಾರೆ. ಕರ್ನಾಟಕ ಹಾಗೂ ಕೇರಳ ಗಡಿಯಲ್ಲಿ ಕೊರೊನಾ ಟೆಸ್ಟ್ ವರದಿ ಕೇಳುತ್ತಿರುವ ಹಿನ್ನೆಲೆ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಹೋಗುವ ಮಾಲಾಧಾರಿಗಳು ಕೊರೊನಾ ಪರೀಕ್ಷೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: 11 ಬಾರಿ ಕೋವಿಡ್ -19 ಲಸಿಕೆ ಪಡೆದ 84 ವರ್ಷದ ವೃದ್ಧ
ಜಿಲ್ಲಾಸ್ಪತ್ರೆ ಆವರಣದ ಕೋವಿಡ್ ಪರೀಕ್ಷಾ ಕೇಂದ್ರದ ಮುಂದೆ ನೂರಾರು ಮಾಲಾಧಾರಿಗಳು ಸರಿದಿ ಸಾಲಲ್ಲಿ ನಿಲ್ಲುತ್ತಿದ್ದಾರೆ. ಶನಿವಾರ ಶಬರಿಮಲೆಗೆ ಹೊರಟಿದ್ದ ಮಾಲಾಧಾರಿಗಳು ವೀಕೆಂಡ್ ಕರ್ಫ್ಯೂ ಹಿನ್ನೆಲೆ ಇಂದೇ ಪರೀಕ್ಷೆ ಮಾಡಿಸಿಕೊಂಡು ಶುಕ್ರವಾರವೇ ಶಬರಿಮಲೆಗೆ ಹೊರಡಲು ಸಿದ್ಧತೆ ನಡೆಸಿದ್ದಾರೆ.