ದಾವಣಗೆರೆ: ಭದ್ರಾ ನೀರಿಗಾಗಿ (Bhadra Water) ದಾವಣಗೆರೆ (Davangere) ಬಂದ್ ಮುಗಿದಿದ್ದರೂ ರೈತರ ಹೋರಾಟ ಮಾತ್ರ ಮುಂದುವರಿದಿದೆ. ಜಿಲ್ಲೆಯ ಹರಿಹರ (Harihara) ತಾಲೂಕಿನ ಮಲೆಬೆನ್ನೂರು ಗ್ರಾಮದಲ್ಲಿ ರೈತರು ಭದ್ರಾ ನೀರಿಗಾಗಿ ಒತ್ತಾಯಿಸಿ ಬತ್ತಿಹೋದ ಗದ್ದೆಯಲ್ಲಿ ವಿಷದ ಬಾಟಲಿ ಹಿಡಿದುಕೊಂಡು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.
ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಬಿಡದೆ ಸರ್ಕಾರ ಸತಾಯಿಸುತ್ತಿದೆ. ಭದ್ರಾದಿಂದ 100 ದಿನಗಳ ಕಾಲ ನೀರು ಬಿಡುವುದಾಗಿ ಭದ್ರಾ ನೀರು ನಿರ್ವಹಣ ಪ್ರಾಧಿಕಾರ ಹೇಳಿತ್ತು. ಆದರೆ ಈಗ ನೀರು ಬಂದ್ ಮಾಡಿ ದಾವಣಗೆರೆ ಭಾಗದ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.
ರೈತರು ಭತ್ತ ನಾಟಿ ಮಾಡಿ ನೀರಿಗಾಗಿ ಕಾದು ಕುಳಿತಿದ್ದು, ಸರ್ಕಾರ ಹಾಗೂ ಕಾಡಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಸೋಮವಾರ ದಾವಣಗೆರೆ ಬಂದ್ ಕೂಡ ಮಾಡಿ ಸರ್ಕಾರಕ್ಕೆ ಎಚ್ಚರಿಸುವ ಕೆಲಸ ಮಾಡಿದ್ದರು. ಇಂದು ಒಣಗಿ ಹೋದ ಭತ್ತದ ಗದ್ದೆಯಲ್ಲಿ ವಿಷದ ಬಾಟಲಿ ಹಿಡಿದು ಕೂತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರು ಕೊಡಿ ಇಲ್ಲ ನಮಗೆ ವಿಷವಾದರೂ ಕೊಡಿ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ಇದನ್ನೂ ಓದಿ: Bengaluru Bandh: ಬಂದೋಬಸ್ತ್ನಲ್ಲಿದ್ದ ಪೊಲೀಸರಿಗೆ ಕೊಟ್ಟ ಟಿಫನ್ನಲ್ಲಿ ಇಲಿ!
ಒಂದು ಎಕರೆಗೆ ಸಾವಿರಾರು ರೂ. ಖರ್ಚು ಮಾಡಿ ಈಗ ಭದ್ರಾ ನೀರು ಇಲ್ಲದೆ ಪರದಾಡುವಂತಾಗಿದೆ. ಕೂಡಲೆ ನೀರು ಬಿಡಬೇಕು ಇಲ್ಲವಾದರೆ ದಾವಣಗೆರೆ ಭಾಗದ ರೈತರು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರೈತರು ಭತ್ತದ ಗದ್ದೆಗಳಲ್ಲಿ ಕೂತು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿಯವರು ಕಾವೇರಿ ಪ್ರತಿಭಟನೆ ರಾಜಕೀಯಕ್ಕಾಗಿ ಮಾಡುತ್ತಿದ್ದಾರೆ: ಸಿದ್ದರಾಮಯ್ಯ
Web Stories