ಕಲಬುರಗಿ: ಇಂದಿನ ದಿನಗಳಲ್ಲಿ ಹಬ್ಬಗಳನ್ನೂ (Festivals) ಪೊಲೀಸರ ಬಂದೋಬಸ್ತ್ನಲ್ಲಿ ಆಚರಿಸಬೇಕಾದ ಸ್ಥಿತಿ ಬಂದಿರುವುದು ದುರ್ದೈವ. ಕಳೆದ 10 ವರ್ಷಗಳಿಂದ ಇಂತಹ ಪರಿಸ್ಥಿತಿ ಬಂದಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿಷಾದ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೈ ಶ್ರೀರಾಮ್ (Jai Sri Ram) ಘೋಷಣೆ ಕೂಗಿದ್ದಕ್ಕೆ ಹಲ್ಲೆ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣ; ನಾಲ್ವರ ಬಂಧನ
ಎಲ್ಲಾ ಧರ್ಮಗಳಲ್ಲೂ ಶಾಂತಿ ಕದಡುವವರು ಕೆಲವರು ಇರ್ತಾರೆ. ಕೆಲವರು ಅವರದ್ದೇ ಧರ್ಮ ಶ್ರೇಷ್ಠ ಅಂತಾ ಭಾವಿಸುತ್ತಾರೆ ಇದು ದುರ್ದೈವ. ನಾನು ಅದಮಾರ ಮಠದ ಶಾಲೆಯಲ್ಲಿ ಓದಿದ್ದೇನೆ. ಆಗ ನಮಗೆ ರಂಜಾನ್, ಗಣೇಶ್ ಹಬ್ಬ, ಕ್ರಿಸ್ಮಸ್, ರಾಮನವಮಿಗೆ ರಜೆ ಸಿಗ್ತಿತ್ತು. ರಂಜಾನ್, ರಾಮನವಮಿ ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದರು ಎಂದು ಸ್ಮರಿಸಿದ್ದಾರೆ.
ಈ ಹಿಂದೆ ರಂಜಾನ್ ಬಂದ್ರೆ ನಾವು ಅವರ ಮನೆಗೆ ಹೋಗಿ ಬಿರಿಯಾನಿ ತಿಂದು ಬರ್ತಿದ್ವಿ, ಕ್ರಿಸ್ಮಸ್ಗೆ ಹೋಗಿ ಕೇಕ್ ತಿನ್ನುತ್ತಿದ್ವಿ. ಯುಗಾದಿ ಬಂದಾಗ ಅವರು ನಮ್ಮ ಮನೆಗೆ ಬಂದು ಹೋಳಿಗೆ ಊಟ ಮಾಡ್ತಿದ್ದರು. ಆದ್ರೆ ಈಗ ಎಲ್ಲ ಹಬ್ಬಗಳನ್ನು ಪೊಲೀಸ್ ಬಂದೋಬಸ್ತ್ನಲ್ಲಿ ಆಚರಣೆ ಮಾಡಬೇಕಿದೆ. 144 ಸೆಕ್ಷನ್ ವಿಧಿಸಿ ಹಬ್ಬ ಆಚರಣೆ ಮಾಡಬೇಕಾದಂತಹ ಪರಿಸ್ಥಿತಿ ಬಂದಿದೆ. ಇದು ಯಾರಿಂದ ಮತ್ತು ಯಾಕೆ ಆಗಿದೆ ಅನ್ನೋದನ್ನ ಯೋಚಿಸಬೇಕು ಎಂದು ಸಲಹೆ ನೀಡಿದ್ದಾರೆ.
ಕಳೆದ 10 ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಹಬ್ಬಗಳನ್ನು ಪೊಲೀಸ್ ಬಂದೋಬಸ್ತ್ನಲ್ಲಿ ಆಚರಿಸಬೇಕಿದೆ. ಯಾರೋ ನಾಲ್ಕು ಜನ ಬಂದು ನಮ್ಮ ಧರ್ಮ ಶ್ರೇಷ್ಠ ಅಂತ ಹೇಳುವುದರಿಂದ ಪೊಲೀಸರು ಎಲ್ಲದಕ್ಕೂ ಭದ್ರತೆ ನೀಡಬೇಕಿದೆ. ಇದು ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 56 ಇಂಚಿನ ಎದೆ ಇರೋ ಮೋದಿ ಮಣಿಪುರದ ಬೆತ್ತಲೆ ಮೆರವಣಿಗೆ ಪ್ರಕರಣದ ಬಗ್ಗೆ ಮಾತಾಡಲಿಲ್ಲ: ಹರಿಪ್ರಸಾದ್