ಹಾಸನ: ಪಾದಯಾತ್ರೆ ಮಾಡಿದ್ರೆ ಮಾತ್ರ ಮತ ಹಾಕ್ತಾರೆ ಅನ್ಕೊಂಡ್ರೆ ಮತ ಹಾಕದೇ ಇರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಶಾಸಕ ಪ್ರೀತಂಗೌಡ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಮೇಕೆದಾಟು ಪಾದಯಾತ್ರೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಎಲ್ಲರೂ ಅವರವರ ಇತಿಮಿತಿಯಲ್ಲಿರಬೇಕು. ರಾಜಕೀಯ ಪಕ್ಷವೂ ಸೇರಿದಂತೆ ಎಲ್ಲರೂ ತಮ್ಮ ಮಿತಿಯಲ್ಲಿ ಇರಬೇಕು. ಆರೋಗ್ಯ ಕಾಪಾಡಿಕೊಳ್ಳೋದಕ್ಕೆ ಎಲ್ಲರೂ ಸೂಕ್ಷ್ಮವಾಗಿರಬೇಕು. ನಿಯಮಪಾಲನೆ ಮಾಡಬೇಕು. ನಾನಂತೂ ಪಾಲನೆ ಮಾಡ್ತಾ ಇದ್ದೇನೆ. ಭಾರತೀಯ ಜನತಾ ಪಾರ್ಟಿಯೂ ಪಾಲನೆ ಮಾಡುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪಂಜಾಬ್ ಸಿಎಂ ಅಭ್ಯರ್ಥಿಯನ್ನು ಜನರೇ ಆಯ್ಕೆ ಮಾಡಲಿ – ನಂಬರ್ ಕೊಟ್ಟ ಕೇಜ್ರಿವಾಲ್
ಎಲ್ಲವನ್ನೂ ಜನರು ಗಮನಿಸುತ್ತಾ ಇರ್ತಾರೆ. ಪಾದಯಾತ್ರೆ ಮಾಡಿದ್ರೆ ಮಾತ್ರ ಜನ ಮತ ಹಾಕ್ತಾರೆ ಅನ್ಕೊಂಡಿದ್ದಾರೆ. ಮತ ಹಾಕದೇ ಇರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅವರ ಒಳಿತಿಗಾಗಿ, ಅವರ ಪಕ್ಷದ ಒಳಿತಿಗಾಗಿ ಸಾರ್ವಜನಿಕರ ಹಾಗೂ ಕೋರ್ಟ್ ಅಭಿಪ್ರಾಯ, ಸರ್ಕಾರದ ಆದೇಶ ಪಾಲನೆ ಮಾಡುವ ಸದ್ಬುದ್ಧಿ ಭಗವಂತ ಅವರಿಗೆ ಕೊಡಲಿ ಎಂದು ಕಿವಿಮಾತನ್ನು ಹೇಳಿದರು.
ನನಗೂ ಸೇರಿದಂತೆ ಎಲ್ಲರಿಗೂ ಬುದ್ಧಿ ಕೊಡಬೇಕು. ಇವತ್ತು ವೈಕುಂಠ ಏಕಾದಶಿ ಎಲ್ಲರಿಗೂ ಒಳ್ಳೆಯದು ಮಾಡಲಿ. ಸಾರ್ವಜನಿಕ ಜೀವನದಲ್ಲಿರುವವರು ರಾಜ್ಯದ ಜನರಿಗೆ ಒಳಿತಾಗುವಂತೆ ನಿರ್ಧಾರಗಳನ್ನು ಕೈಗೊಳ್ಳಲಿ. ಎಲ್ಲ ಜನಪ್ರತಿನಿಧಿಗಳು ಹಾಗೂ ಎಲ್ಲ ರಾಜಕೀಯ ಪಕ್ಷಗಳು ಒಳ್ಳೆ ನಿರ್ಧಾರ ಮಾಡಲಿ ಎಂದು ದೇವರಲ್ಲಿ ಕೇಳುತ್ತೇನೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಖಾಸಗಿ ಲ್ಯಾಬ್ಗಳಲ್ಲೂ ಉಚಿತ ಆರ್ಟಿ-ಪಿಸಿಆರ್ ಪರೀಕ್ಷೆಗೆ ಎಎಪಿ ಆಗ್ರಹ