ಬೆಂಗಳೂರು: ಸಿಲಿಕಾನ್ ಸಿಟಿ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ರೌಡಿಶೀಟರ್ ಓರ್ವನ ಕಾಲಿಗೆ ಗುಂಡು ಹೊಡೆದಿರುವ ಘಟನೆ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಜಗೋಪಾಲ್ ನಗರ ಪೊಲೀಸ್ ಠಾಣೆಯ ರೌಡಿಶೀಟರ್ ಸೀನ ಅಲಿಯಾಸ್ ಸೀಗಡಿ ಸೀನನಿಗೆ ಪೊಲೀಸರಿಂದ ಗುಂಡೇಟು ಬಿದ್ದಿದೆ. ಪ್ರಕರಣವೊಂದರ ಸಂಬಂಧ ರೌಡಿಶೀಟರ್ ನನ್ನು ಬಂಧಿಸಲು ಪೊಲೀಸರು ತೆರೆಳಿದ್ದರು. ಈ ವೇಳೆ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ ಸೀನನಿಂದ ಆತ್ಮರಕ್ಷಣೆಗಾಗಿ ರಾಜಗೋಪಾಲ್ ನಗರ ಪೊಲೀಸರು ಮೊದಲು ಗಾಳಿಯಲ್ಲಿ ಗುಂಡು ಹರಿಸಿದ್ದಾರೆ. ಆದರೂ ಸೀನ ಪೊಲೀಸರ ಮೇಲೆ ದಾಳಿ ಮುಂದುವರೆಸಿದನು. ಇದೇ ವೇಳೆ ಆತ್ಮರಕ್ಷಣೆಗಾಗಿ ರಾಜಗೋಪಾಲನಗರ ಇನ್ಸ್ಪೆಕ್ಟರ್ ದಿನೇಶ್ ಪಾಟೀಲ್ ಸೀನನ ಕಾಲಿದೆ ಗುಂಡು ಹೊಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ರೌಡಿಶೀಟರ್ ಸೀನನನ್ನ ಬಂಧಿಸಲು ತೆರಳಿದ್ದ ರಾಜಗೋಪಾಲನಗರ ಇನ್ಸ್ಪೆಕ್ಟರ್ ಹಾಗೂ ಕ್ರೈಂ ಸಿಬ್ಬಂದಿ ಮೇಲೆ ಡ್ರ್ಯಾಗರ್ ನಿಂದ ಹಲ್ಲೆ ಮಾಡಲು ಮುಂದಾದನು. ಅಲ್ಲದೇ ಸೀನ ಪೇದೆ ವೀರಭದ್ರಪ್ಪ ಅವರಿಗೆ ತಿವಿದು ಹಲ್ಲೆ ಮಾಡಿದ್ದಾನೆ.
ಈ ಹಿಂದೆ ರಾಜಗೋಪಾಲ ನಗರದಲ್ಲಿ 11 ಆಟೋ ಹಾಗೂ 4 ಕಾರಿನ ಗಾಜು ಹೊಡೆದು ಹಾಕಿ ಸೀನ ಹಾಗೂ ಆತನ ಸಹಚರರು ರೌಡಿಸಂ ಮಾಡಿದ್ದರು. ಈ ಪ್ರಕರಣ ಸಂಬಂಧ ಬಂಧಿಸಲು ತೆರಳಿದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಸೀನ ಪ್ರಯತ್ನ ಮಾಡಿದ. ಸದ್ಯ ಪೇದೆ ಹಾಗೂ ರೌಡಿಶೀಟರ್ ನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರೆದಿದೆ.