ಹಾವೇರಿ: ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುವುದರ ಜೊತೆಯಲ್ಲೇ ಸುಮಾರು 3 ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿರೋ ಹಾವೇರಿಯ ವ್ಯಕ್ತಿ ಇಂದಿನ ನಮ್ಮ ಪಬ್ಲಿಕ್ ಹೀರೋ.
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಡಮ್ಮಳ್ಳಿ ಗ್ರಾಮದ ನಿವಾಸಿ ರಮೇಶ್, 1999ರಲ್ಲಿ ಡಿಆರ್ ಪೊಲೀಸ್ ಪೇದೆಯಾಗಿದ್ದಾರೆ. ಬಾಲ್ಯದಲ್ಲಿ ಮೀನು ಹಿಡಿಯಲು ಹೋಗ್ತಿದ್ದ ರಮೇಶ್, ಕೆರೆಯಲ್ಲಿ ಕಾಣಿಸ್ತಿದ್ದ ಹಾವುಗಳನ್ನ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡ್ತಿದ್ದರಂತೆ. ಹೀಗೇ ಇದು ಅಭ್ಯಾಸ ಆಗಿತ್ತು. ಹಾವೇರಿ ಸಶಸ್ತ್ರ ಮೀಸಲು ಪೊಲೀಸ್ ಪಡೆಗೆ ಸೇರಿದಾಗ ಕೆರಿಮತ್ತಿಹಳ್ಳಿಯ ಕೆರೆ ಬಳಿಯೇ ಇರೋ ಕ್ವಾಟ್ರಸ್ಗೆ ಹಾವುಗಳು ಬರ್ತಿದ್ದು, ಇವುಗಳನ್ನು ಹಿಡಿಯುತ್ತಿದ್ದರು.
ಹೀಗೆ ಹಾವು ಹಿಡಿಯುತ್ತಿದ್ದ ರಮೇಶ್ ಅವರಿಗೆ ಹಾವು ಹಿಡಿದುಕೊಡಲೆಂದು ದಿನೇ ದಿನೇ ಫೋನ್ಗಳು ಹೆಚ್ಚಾದವು. ರಮೇಶ್ ಹಾವು ಹಿಡಿಯೋ ಸುದ್ದಿ ತಿಳಿದಿದ್ದ ಹಿಂದಿನ ಎಸ್ಪಿ ಚೇತನ್ ಸಿಂಗ್ ರಾಥೋಡ್, ಮೈಸೂರಿನ ಸ್ನೇಕ್ ಶ್ಯಾಮ್ ಅವರ ಬಳಿ ಸಮಾರು 15 ದಿನ ತರಬೇತಿ ಕೊಡಿಸಿದ್ದಾರೆ. ಪೊಲೀಸ್ ಇಲಾಖೆಗೆ ಸೇರಿ 18 ವರ್ಷಗಳಾಗಿದ್ದು, ಈಗಾಗಲೇ 3 ಸಾವಿರಕ್ಕೂ ಅಧಿಕ ಹಾವುಗಳನ್ನ ಹಿಡಿದು ರಮೇಶ್ ಅವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಪೇದೆ ರಮೇಶ್ ಆಗಿದ್ದವರು ಇದೀಗ ಸ್ನೇಕ್ ರಮೇಶ್ ಆಗಿದ್ದಾರೆ. ರಮೇಶ್ ಕಾರ್ಯಕ್ಕೆ ಪೊಲೀಸ್ ಇಲಾಖೆ ಹಾಗೂ ಹಾವೇರಿ ನಗರದ ಜನತೆ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.
https://www.youtube.com/watch?v=carUBzBHV0s