ಮಂಗಳೂರು: ನಟೋರಿಯಸ್ ರೌಡಿ ಮೇಲೆ ಪೊಲೀಸರು ಫೈರಿಂಗ್ ನಡೆಸಿದ ಘಟನೆ ಮಂಗಳೂರು ನಗರ ಹೊರವಲಯದ ಪಚ್ಚನಾಡಿನಲ್ಲಿ ನಡೆದಿದೆ.
ಟಾರ್ಗೆಟ್ ಗ್ರೂಪ್ ಸದಸ್ಯ, ರೌಡಿ ಉಮರ್ ಫಾರೂಕ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಟಾರ್ಗೆಟ್ ಗ್ರೂಪ್ ಮುಖಂಡ ಇಲ್ಯಾಸ್ ಕೊಲೆ ಆರೋಪಿ ಸಮೀರ್ ಹತ್ಯೆಗೆ ಸಂಚು ಹಾಕಿದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಲು ಮುಂದಾಗಿದ್ದಾರೆ.
ಈ ವೇಳೆ ಉಮರ್ ಫಾರೂಕ್ ಮತ್ತು ತಂಡ ಪೊಲೀಸರ ಮೇಲೆ ಪ್ರತಿ ದಾಳಿ ನಡೆಸಿದ್ದಾರೆ. ಶೂಟೌಟ್ ಕಾಳಗದಲ್ಲಿ ಪೊಲೀಸ್ ಪೇದೆ ಸಂದೀಪ್ ಗಾಯಗೊಂಡಿದ್ದಾರೆ. ಒಂದು ವರ್ಷದ ಹಿಂದೆ ಟಾರ್ಗೆಟ್ ಗ್ರೂಪ್ ಮುಖಂಡ ಇಲ್ಯಾಸ್ ಕೊಲೆಯಾಗಿದ್ದನು. ಇಲ್ಯಾಸ್ ಸಂಬಂಧಿ ಉಮರ್ ಫಾರೂಕ್, ಸುರ್ಮಾ ಇಮ್ರಾನ್ ಜೊತೆ ಸೇರಿ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು.
ಮಂಗಳೂರಿನ ಕಂಕನಾಡಿ ಪೊಲೀಸರು ಕಾಲಿಗೆ ಶೂಟ್ ಮಾಡಿ ಫಾರೂಕ್ನನ್ನು ಬಂಧಿಸಿದ್ದಾರೆ. ಉಮರ್ ಫಾರೂಕ್ ಎರಡು ಪ್ರಮುಖ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದನು. ಸಮೀರ್, ಇಲ್ಯಾಸ್ ಹತ್ಯೆ ಪ್ರಕರಣದ ಆರೋಪಿಯಾಗಿದ್ದು, ದಾವೂದ್ ಗ್ಯಾಂಗಿನ ಸದಸ್ಯ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ರೌಡಿ ಫಾರೂಕ್ ಮತ್ತು ಪೇದೆ ಸಂದೀಪ್ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.