ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 2 ದಿನಗಳ ಕೇರಳ ಪ್ರವಾಸದಲ್ಲಿದ್ದಾರೆ. ಗುರುವಾಯೂರಿನಲ್ಲಿರುವ ಪ್ರಸಿದ್ಧ ಶ್ರೀಕೃಷ್ಣ ದೇವಾಲಯಕ್ಕೆ (Guruvayur Temple) ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಕೇರಳಕ್ಕೆ ಭೇಟಿ ನೀಡಿದ ಎರಡನೇ ದಿನದಂದು ಶ್ರೀ ರಾಮಸ್ವಾಮಿ ದೇವಸ್ಥಾನ ಮತ್ತು ಗುರುವಾಯೂರು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೇ ವೇಳೆ ಮೋದಿ ಅವರು ತುಲಾಭಾರ ಮಾಡಲಾಯಿತು. ಇದನ್ನೂ ಓದಿ: ಖ್ಯಾತನಟ ಸುರೇಶ್ ಗೋಪಿ ಪುತ್ರಿಯ ಮದುವೆಯಲ್ಲಿ ಪ್ರಧಾನಿ ಮೋದಿ
ಶ್ರೀ ರಾಮಸ್ವಾಮಿ ದೇವಾಲಯವು ಭಗವಾನ್ ರಾಮ ಮತ್ತು ಸಹೋದರರಾದ ಭರತ್, ಲಕ್ಷ್ಮಣ ಮತ್ತು ಶತ್ರುಘ್ನರಿಗೆ ಸಮರ್ಪಿತವಾಗಿರುವ ನಾಲ್ಕು ದೇವಾಲಯಗಳ ನಲಂಬಲಂ ಸರ್ಕ್ಯೂಟ್ನ ಭಾಗವಾಗಿದೆ. ಮಲಯಾಳಂ ತಿಂಗಳ ಕರ್ಕಿಡಕಂನಲ್ಲಿ ಒಂದೇ ದಿನದಲ್ಲಿ ಎಲ್ಲಾ ನಾಲ್ಕು ದೇವಾಲಯಗಳಿಗೆ ಭೇಟಿ ನೀಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಗೆ ಮುಂಚಿತವಾಗಿ ಅಗತ್ಯವಿರುವ ಆಚರಣೆಗಳನ್ನು ಕೈಗೊಳ್ಳುವುದಾಗಿ ಮೋದಿ ಶುಕ್ರವಾರ ಹೇಳಿದ್ದರು. ನಂತರ ಅವರು ನಾಸಿಕ್ನ ಪಂಚವಟಿಗೆ ಭೇಟಿ ನೀಡಿದ್ದರು. ಶ್ರೀರಾಮ ತನ್ನ ಹೆಚ್ಚಿನ ವನವಾಸ ಕಳೆದಿದ್ದ ಭಾಗ ಇದಾಗಿತ್ತು. ಇದನ್ನೂ ಓದಿ: ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ಮೂರ್ತಿ ಇಂದು ರಾಮಮಂದಿರ ಪ್ರವೇಶ – ದೇವಾಲಯದ ಸುತ್ತ ಪ್ರದಕ್ಷಿಣೆ
ಪ್ರಧಾನಿ ಮೋದಿ ಅವರು ಕೇರಳ ದೇವಾಲಯಗಳಿಗೆ ಭೇಟಿ ನೀಡಿರುವ ಫೋಟೋಗಳನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗುರುವಾಯೂರಿನಲ್ಲಿ ಜನರು ನನ್ನನ್ನು ಆಶೀರ್ವದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಜನರ ಪ್ರೀತಿಗೆ ನಾನು ಆಭಾರಿ. ಜನರಿಗಾಗಿ ಇನ್ನಷ್ಟು ಕೆಲಸ ಮಾಡಲು ಇದು ನನ್ನನ್ನು ಪ್ರೇರೇಪಿಸಿದೆ. ಪವಿತ್ರವಾದ ಗುರುವಾಯೂರು ದೇವಸ್ಥಾನದಲ್ಲಿ ಪ್ರಾರ್ಥಿಸಿದೆ. ಈ ದೇವಾಲಯದ ದೈವಿಕ ಶಕ್ತಿ ಅಪಾರವಾಗಿದೆ. ಪ್ರತಿಯೊಬ್ಬ ಭಾರತೀಯನು ಸಂತೋಷದಿಂದ ಮತ್ತು ಸಮೃದ್ಧವಾಗಿರಲಿ ಎಂದು ನಾನು ಪ್ರಾರ್ಥಿಸಿದೆ ಎಂದು ಬರೆದುಕೊಂಡಿದ್ದಾರೆ.
ಇದಕ್ಕೂ ಮೊದಲು ಮೋದಿ ಅವರು, ಗುರುವಾಯೂರು ದೇವಸ್ಥಾನದಲ್ಲಿ ನಡೆದ ನಟ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಸುರೇಶ್ ಗೋಪಿ ಅವರ ಮಗಳ ವಿವಾಹದಲ್ಲಿ ಪಾಲ್ಗೊಂಡಿದ್ದರು. ನವಜೋಡಿಗಳಿಗೆ ಶುಭಹಾರೈಸಿದರು. ಇದನ್ನೂ ಓದಿ: ಪ್ರತಿದಿನ ಒಂದೊಂದು ಕೆಜಿ ಮೀಸಲು – ಶ್ರೀರಾಮನ ನೈವೇದ್ಯಕ್ಕೆ 1,265 KG ತೂಕದ ಲಡ್ಡು ಅರ್ಪಿಸಿದ ರಾಮಭಕ್ತ