– ಮನೆ ಬಾಗಿಲಿಗೆ ತರಕಾರಿ, ಹೂ, ಹಣ್ಣು ಬರುತ್ತೆ
ಗದಗ: ಲಾಕ್ಡೌನ್ ಮುಗಿಯುವರೆಗೆ ತರಕಾರಿ ಮಾರ್ಕೆಟ್ ಬಂದ್ ಮಾಡಲಾಗಿದ್ದು, ವ್ಯಾಪಾರಸ್ಥರು ತಳ್ಳುವ ಗಾಡಿ ಮೂಲಕ ನಗರದ ವಾರ್ಡ್ಗಳಿಗೆ ಸಂಚರಿಸಿ ಮಾರಾಟ ಮಾಡಬೇಕು ಎಂದು ಎಸ್.ಪಿ ಯತೀಶ್ ತಿಳಿಸಿದರು.
ನಗರಸಭೆ ಆವರಣದಲ್ಲಿ ತರಕಾರಿ ಹಾಗೂ ಬೀದಿಬದಿ ವ್ಯಾಪಾರಸ್ಥರೊಂದಿಗೆ ಸಭೆ ನಡೆಸಿದರು. ಈ ಸಭೆನಲ್ಲಿ ಅಧಿಕಾರಿಗಳು ಹಾಗೂ ವ್ಯಾಪಾರಸ್ಥರು ಅಂತರ ಕಾಯ್ದುಕೊಂಡಿದ್ದರು. ಪ್ರತಿ ವಾರ್ಡ್ಗೆ ಎಂಟು ಜನ ತರಕಾರಿ ಮಾರಾಟಗಾರರನ್ನು ನೇಮಕ ಮಾಡಲಾಗುತ್ತದೆ. ಯಾರ್ಯಾರು ಯಾವ ಯಾವ ಏರಿಯಾ ಎಂಬುದನ್ನು ತರಕಾರಿ ಹಾಗೂ ಬೀದಿಬದಿ ವ್ಯಾಪಾರಿಗಳು ನಿರ್ಧರಿಸಬೇಕು. ಅಂತಹ ಮಾರಾಟಗಾರರಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಗುರುತಿನ ಪಾಸ್ ನೀಡಲಾಗುತ್ತೆ. ಕೊಡುವ ತೆಗೆದುಕೊಳ್ಳುವ ವ್ಯವಹಾರದಲ್ಲಿ ಅಂತರ ಕಾಯ್ದುಕೊಳ್ಳಬೇಕು. ಜನರು ಅವರ ಮನೆ ಬಳಿ ತರಕಾರಿ ಖರೀದಿಸಿದರೆ ಜನಸಂದಣಿಯೂ ಆಗುವುದಿಲ್ಲ. ಸೋಂಕು ಹರಡುವ ಅವಕಾಶವನ್ನು ತಡೆಯಬಹುದು ಎಂದರು.
ನಗರದಲ್ಲಿ ಎರಡು ದಿನಗಳಿಂದ ತರಕಾರಿ, ಹೂ, ಹಣ್ಣಿನ ಮಾರುಕಟ್ಟೆಯಲ್ಲಿ ಜನ ಜಂಗುಳಿ ಹೆಚ್ಚಾಗುತ್ತಿದೆ. ಹೀಗಾಗಿ ಅನಿವಾರ್ಯವಾಗಿ ಪೊಲೀಸರು ಲಾಠಿ ರುಚಿ ತೋರಿಸುವ ಮೂಲಕ ಜನರನ್ನು, ವ್ಯಾಪಾರಸ್ಥರನ್ನು ಚದುರಿಸಬೇಕಾಗಿದೆ ಎಂದು ಎಸ್.ಪಿ ಹೇಳಿದರು.
ಈ ಸಭೆನಲ್ಲಿ ನಗರಸಭೆ ಆಯುಕ್ತ ಮನ್ಸೂರ್ ಅಲಿ, ತಹಶೀಲ್ದಾರ್ ಶ್ರೀನಿವಾಸ ಕುಲಕರ್ಣಿ, ಡಿವೈಎಸ್ಪಿ ಪ್ರಹ್ಲಾದ್, ಸಿಪಿಐ ದೇಸಾಯಿ, ಪಟ್ಟಣ ವ್ಯಾಪಾರಿ ಸಮಿತಿ ಸದಸ್ಯರು, ತರಕಾರಿ ಮತ್ತು ಬೀದಿಬದಿ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.