ಬಳ್ಳಾರಿ: ಚಿನ್ನಾಭರಣಗಳನ್ನು ಡಬಲ್ ಮಾಡುತ್ತೇನೆ ಎಂದು ನಂಬಿಸಿ ಮೋಸ ಮಾಡುತ್ತಿದ್ದ ಮೌಲ್ವಿಗೆ ಮಹಿಳೆಯರೇ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ತೆಕ್ಕಲಕೋಟೆ ಗ್ರಾಮದ ನಿವಾಸಿಯಾದ ಖಾದರ ಭಾಷಾ ಧರ್ಮದೇಟು ತಿಂದ ಕಳ್ಳ ಮೌಲ್ವಿ. ಖಾದರಭಾಷಾ ಬಳ್ಳಾರಿಯ ಹೊಸಯರ್ರಗುಡಿ ಗ್ರಾಮದ ಮಸೀದಿಯಲ್ಲಿ ನಮಾಜ್ ಕಲಿಸುವ ಕೆಲಸ ಮಾಡುತ್ತಿದ್ದ. ಹೀಗಾಗಿ ನಮಾಜ್ ಕಲಿಸುವ ಮೌಲ್ವಿಗೆ ಪ್ರತಿನಿತ್ಯ ಗ್ರಾಮದ ಒಬ್ಬೊಬ್ಬರು ಅವರ ಮನೆಯಲ್ಲಿ ಊಟದ ವ್ಯವಸ್ಥೆ ಮಾಡುತ್ತಿದ್ದರು. ಗ್ರಾಮಸ್ಥರ ಮನೆಗಳಿಗೆ ಊಟಕ್ಕೆ ಹೋದ ಸಂದರ್ಭದಲ್ಲಿ ಮಹಿಳೆಯರನ್ನು ನಂಬಿಸಿ ಚಿನ್ನಾಭರಣವನ್ನು ಅಕ್ಕಿಯಿಲ್ಲಿಟ್ಟು ಡಬಲ್ ಮಾಡೋದಾಗಿ ನಂಬಿಸಿ ಖಾದರ ಭಾಷಾ ಮೋಸ ಮಾಡಿದ್ದಾನೆ.
ಈ ಗ್ರಾಮದಲ್ಲಿ 8 ರಿಂದ 10 ಜನರಿಗೆ ಸುಮಾರು 80 ಗ್ರಾಂ ಬಂಗಾರ, ಒಂದೂವರೆ ಲಕ್ಷ ರೂ. ವಂಚಿಸಿ ಮೋಸ ಮಾಡಿ ಪರಾರಿಯಾಗಿದ್ದ. ಕೊಪ್ಪಳದಲ್ಲಿ ತೆಲೆಮರೆಸಿಕೊಂಡಿದ್ದ ಖಾದರ ಭಾಷಾ ಸಿಗುತ್ತಿದ್ದಂತೆ ಮಹಿಳೆಯರು ಹಿಗ್ಗಾಮುಗ್ಗಾ ಥಳಿಸಿ, ಗ್ರಾಮದಲ್ಲಿ ಮೆರವಣಿಗೆ ಮಾಡಿ ಮೋಕಾ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಮೌಲ್ವಿ ಈ ಹಿಂದೆಯೂ ಹೊಸಪೇಟೆಯ ಮಲಪನಗುಡಿ ಗ್ರಾಮದಲ್ಲೂ ಮೋಸ ಮಾಡಿದ್ದ ಬಗ್ಗೆ ಆರೋಪವಿದೆ. ಹೀಗಾಗಿ ಜನರನ್ನು ನಂಬಿಸಿ ಮೋಸ ಮಾಡುತ್ತಿದ್ದ ಮೌಲ್ವಿಯನ್ನು ಇದೀಗ ಪೊ ಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ಮೌಲ್ವಿ ಖಾದರ ಭಾಷಾ ಹಣ ಪಡೆದು ಮಟ್ಕಾ ಆಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡಿದ್ದಾನೆ.