– ಕಂಗಾಲಾದ ಪತ್ನಿಯೂ ಆತ್ಮಹತ್ಯೆಗೆ ಶರಣು
ಮೈಸೂರು: ಕಳ್ಳತನ ಕೇಸಿನಲ್ಲಿ ಹೆಂಡತಿ ಸಿಕ್ಕಿಬಿದ್ದಿದ್ದರಿಂದ ಬೇಸತ್ತ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ನಗರದ ವಿವಿ ಮೊಹಲ್ಲಾದಲ್ಲಿ ನಡೆದಿದೆ.
35 ವರ್ಷದ ರಾಜು ಆತ್ಮಹತ್ಯೆಗೆ ಶರಣಾದ ಪತಿ. ರಾಜು ಅವರ ಪತ್ನಿ ಲತಾ ಇತ್ತೀಚಿಗೆ ತಾವು ಕಲಸ ಮಾಡುತ್ತಿದ್ದ ಮನೆಯಲ್ಲಿ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ಪೊಲೀಸ್ ವಿಚಾರಣೆ ವೇಳೆ ಲತಾ ತಪ್ಪೊಪ್ಪಿಕೊಂಡು ಕದ್ದ ಪದಾರ್ಥಗಳನ್ನು ಹಿಂದಿರುಗಿಸಿ, ಜಾಮೀನು ಪಡೆದು ಹೊರಬಂದಿದ್ದರು.
ಪತ್ನಿಯ ಕಳ್ಳತನ ಪ್ರಕರಣದಿಂದ ಮನನೊಂದ ರಾಜು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ಪತಿಯ ಆತ್ಮಹತ್ಯೆಯಿಂದ ಕಂಗಾಲಾದ ಲತಾ ಕೂಡ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಅಸ್ವಸ್ಥಗೊಂಡ ಲತಾರನ್ನು ನಗರದ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಗದೇ ಲತಾ ಕೂಡ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ವಿವಿ ಪುರಂ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.