ಮೈಸೂರು: ನಿರುಪಯುಕ್ತ ಬೋರ್ವೆಲ್ ಒಳಗೆ ಬಿದಿದ್ದ ಆಡಿನ ಮರಿಯನ್ನು ಜೀವಂತವಾಗಿ ರಕ್ಷಣೆ ಮಾಡಿದ ಘಟನೆ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಹೆಬ್ಬಾಳ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಚೆಲುವರಾಜ್ ಎಂಬವರ ಜಮೀನಿನಲ್ಲಿ ನಿರುಪಯುಕ್ತವಾದ ಬೋರ್ವೆಲ್ ಇತ್ತು. ಅವರದ್ದೇ ಆಡಿನ ಮರಿ ಜಮೀನಿನಲ್ಲಿ ಮೇಯುತ್ತಿದ್ದಾಗ ಇದ್ದಕ್ಕಿದಂತೆ ನಾಪತ್ತೆಯಾಗಿದೆ. ಹೀಗಾಗಿ ಆತಂಕಗೊಂಡ ಮಾಲೀಕ ಆಡಿನ ಮರಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಬೋರ್ವೆಲ್ ಒಳಗಿಂದ ಶಬ್ದ ಕೇಳಿ ಬಂದಿದೆ.
ಸುಮಾರು 25 ಅಡಿ ಅಳದ ಬೋರ್ವೆಲ್ ಒಳಗೆ ಆಡಿನ ಮರಿ ಬಿದ್ದಿತ್ತು. ಇದನ್ನು ಗಮನಿಸಿ ಚೆಲುವಚಾರ್ ತಕ್ಷಣ ಗ್ರಾಮ ಪಂಚಾಯ್ತಿಯವರಿಗೆ ವಿಷಯ ತಿಳಿಸಿದ್ದಾರೆ. ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಾದೇಗೌಡ ನೇತೃತ್ವದಲ್ಲಿ ಸಿಬ್ಬಂದಿ ಜೆಸಿಬಿಯಿಂದ ಮಣ್ಣು ತೆಗೆಸಿ ಮರಿಯನ್ನು ಜೀವಂತವಾಗಿ ರಕ್ಷಿಸಿದ್ದಾರೆ.