ಚಿಕ್ಕಬಳ್ಳಾಪುರ: ಕುರಿ, ಮೇಕೆ ಮಾರಾಟ ಮಾಡಲು ಸಂತೆಯಲ್ಲಿ ಸಾವಿರಾರು ಮಂದಿ ಜಮಾವಣೆಯಾಗಿದ್ದು ಕೊರೊನಾ ನಿಯಮಗಳನ್ನು ಗಾಳಿಗೆ ತೂರಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಪೇರೇಸಂದ್ರ ಗ್ರಾಮದಲ್ಲಿ ನಡೆದಿದೆ.
ಪೇರೇಸಂದ್ರ ಗ್ರಾಮದ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯ ಆವರಣದಲ್ಲಿ ಪ್ರತಿ ಸೋಮವಾರ ಸಾವಿರಾರು ಮಂದಿ ಜಮಾವಣೆಯಾಗುತ್ತಾರೆ. ಈ ವಾರವೂ ಸಹ ಕೊರೊನಾ ನಡುವೆಯೂ ಎಂದಿನಂತೆ ಸಾವಿರಾರು ಮಂದಿ ಜಮಾವಣೆಯಾಗಿದ್ದು ಕುರಿ ಸಂತೆ ಕೊರೊನಾ ಜಾತ್ರೆಯಾಗಲಿದ್ಯಾ ಎಂಬಂತಾಗಿದೆ.
ಬಹುತೇಕರು ಮಾಸ್ಕ್ ಧಾರಣೆ ಮಾಡಿಲ್ಲ. ಮಾಸ್ಕ್ ಧರಿಸಿದ್ರೂ ಸುಖಾಸುಮ್ಮನೆ ಗಲ್ಲಕ್ಕೆ ಧರಿಸಿದ್ದು, ಕೊರೊನಾ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. ಕೊರೊನಾ ನಿಯಂತ್ರಣಕ್ಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರಿಗಳು ಸಹ ಕಣ್ಣಿದ್ದು ಕುರುಡರಾಗಿದ್ದಾರೆ. ಜಿಲ್ಲಾಡಳಿತ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಈ ಸಂತೆಗೆ ಕೇವಲ ನಮ ರಾಜ್ಯ ಅಷ್ಟೇ ಅಲ್ಲದೆ ಪಕ್ಕದ ಆಂಧ್ರಪ್ರದೇಶದಿಂದಲೂ ಜನ ಆಗಮಿಸುತ್ತಾರೆ. ಇದನ್ನೂ ಓದಿ: ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ಕೊರೊನಾ ಪಾಸಿಟಿವ್
ಈಗಗಾಲೇ ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬಿದೆ. ಸಮುದಾಯದಲ್ಲಿ ಪ್ರಸರಣವಾಗಿದ್ದು ಜನಸಂದಣಿಗಳಿಗೆ ಬ್ರೇಕ್ ಹಾಕಬೇಕಿದೆ. ಜಿಲ್ಲಾಡಳಿತ ಆದಷ್ಟು ಬೇಗ ಈ ಕ್ರಮಕೈಗೊಳ್ಳಬೇಕು ಅಂತ ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.