ರಾಜ್ಯದ ಜನತೆ ಚುನಾವಣೆ ಹಾಗೂ ಐಪಿಎಲ್ ಪಂದ್ಯಾವಳಿಯಲ್ಲಿ ಮುಳುಗಿ ಹೋಗಿರುವ ಸಂದರ್ಭದಲ್ಲಿ ಕನ್ನಡದ ಎರಡು ಮಹತ್ವದ ಚಿತ್ರಗಳು ಇಂದು ಬಿಡುಗಡೆ ಆಗುತ್ತಿವೆ. ತಮ್ಮದೇ ಆದ ಕಾರಣಗಳಿಂದಾಗಿ ಈ ಚಿತ್ರಗಳು ನಿರೀಕ್ಷೆ ಮೂಡಿಸಿವೆ. ಆದರೆ, ಪ್ರೇಕ್ಷಕ ಈ ಸಿನಿಮಾಗಳನ್ನು ಯಾವ ರೀತಿಯಲ್ಲಿ ಸ್ವೀಕರಿಸುತ್ತಾನೆ ಎನ್ನುವುದನ್ನು ಕಾದು ನೋಡಬೇಕಿದೆ.
ವೀರಂ
ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ ಮೂಲಕ ಕೆ.ಎಂ. ಶಶಿಧರ್ ಅವರು ನಿರ್ಮಿಸಿರುವ ಫ್ಯಾಮಿಲಿ ಎಮೋಷನ್ ಜೊತೆಗೆ ಲವ್, ಆಕ್ಷನ್, ಥ್ರಿಲ್ಲರ್ ಡ್ರಾಮಾ ಕಥಾಹಂದರ ಹೊಂದಿರುವ ಚಿತ್ರ ವೀರಂ (Veeram) ರಾಜ್ಯಾದ್ಯಂತ ತೆರೆಕಾಣುತ್ತಿದೆ. ಟ್ರೈಲರ್, ಹಾಡುಗಳ ಮೂಲಕ ದೊಡ್ಡ ಮಟ್ಟದ ಕುತೂಹಲ ಹುಟ್ಟುಹಾಕಿರುವ ಈ ಚಿತ್ರಕ್ಕೆ ಖದರ್ ಕುಮಾರ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಒಂದು ಕುಟುಂಬಕ್ಕೆ ತೊಂದರೆ ಬಂದಾಗ ಎಲ್ಲರೂ ಹೇಗೆ ಜೊತೆಗೆ ನಿಲ್ತಾರೆ ಎನ್ನುವುದು ಚಿತ್ರದ ಕಥೆ.
ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ (Rachita Ram) ಹಾಗೂ ನಟಿ ಶೃತಿ, ಅಕ್ಕ ತಮ್ಮನಾಗಿ ಅಲ್ಲದೆ ಶ್ರೀನಗರ ಕಿಟ್ಟಿ ಅಣ್ಣನಾಗಿಯೂ ಕಾಣಿಸಿಕೊಂಡಿದ್ದಾರೆ. ರಚಿತಾರಾಮ್, ಶಿಶ್ಯ ದೀಪಕ್, ಬಲ ರಾಜವಾಡಿ, ಅಚ್ಯುತ್ಕುಮಾರ್, ಸ್ವಾತಿ, ಮೈಕೋ ನಾಗರಾಜ್, ಪ್ರಶಾಂತ್ ನಟನಾ, ಹನುಮಂತೇಗೌಡ ಅಲ್ಲದೆ ನಿರ್ದೇಶಕರಾದ ಜೋಸೈಮನ್, ವಿ.ನಾಗೇಂದ್ರಪ್ರಸಾದ್ ಉಳಿದ ತಾರಾಬಳಗದಲ್ಲಿದ್ದಾರೆ. ಇದನ್ನೂ ಓದಿ: ರಿಲಯನ್ಸ್ ಜ್ಯುವೆಲ್ಸ್ಗಾಗಿ ಬೆಂಗಳೂರಿಗೆ ಬಂದ ಜಾನ್ವಿ ಕಪೂರ್
5 ವಿಭಿನ್ನ ಕಥೆಗಳ ಪೆಂಟಗನ್
ಐದು ಬೇರೆ ಬೇರೆ ಜಾನರ್ ಕಥೆಗಳನ್ನು ಇಟ್ಟುಕೊಂಡು ಮಾಡಿರುವ ಅಂಥಾಲಜಿ ಸಿನಿಮಾ ಪೆಂಟಗನ್ (Pentagon) ರಾಜ್ಯಾದ್ಯಂತ ತೆರೆಕಾಣುತ್ತಿದೆ. ಈ ಚಿತ್ರವನ್ನು ನಿರ್ದೇಶಕ ಕಮ್ ನಿರ್ಮಾಪಕ ಗುರು ದೇಶಪಾಂಡೆ ಅವರು ತಮ್ಮ ಜಿ.ಅಕಾಡೆಮಿ ಅಡಿಯಲ್ಲಿ ನಿರ್ಮಿಸಿದ್ದು, ಚಿತ್ರದ 5 ಕಥೆಗಳಿಗೆ ಆಕಾಶ್ ಶ್ರೀವತ್ಸ, ಚಂದ್ರಮೋಹನ್, ರಾಘು ಶಿವಮೊಗ್ಗ, ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ಆ್ಯಕ್ಷನ್-ಕಟ್ ಹೇಳಿದ್ದಾರೆ.
ಚಿತ್ರದಲ್ಲಿ ಬರುವ ಡೆತ್ ಥೀಮ್ 5 ಕಥೆಗಳಲ್ಲೂ ಕಾಮನ್ ಆಗಿದ್ದು, ಈ ಐದೂ ಕತೆಗಳ ಕೊನೆಯಲ್ಲಿ ಕಾಗೆಯೊಂದು ಕತೆಗಳಿಗೆ ಲಿಂಕ್ ಮಾಡುತ್ತ ಹೋಗುತ್ತದೆ. ಮಣಿಕಾಂತ್ ಕದ್ರಿ ಅವರ ಸಂಗೀತ, ಕಿರಣ್ ಹಂಪಾಪುರ, ಅಭಿಲಾಶ್ ಕಲ್ಲತ್ತಿ, ಗುರುಪ್ರಸಾದ್ ಅವರ ಛಾಯಾಗ್ರಹಣ, ವೆಂಕಟೇಶ್ ಯುವಿಡಿ ಅವರ ಸಂಕಲನ ಚಿತ್ರಕ್ಕಿದೆ.
ಈ ಚಿತ್ರದಲ್ಲಿ ಹಿರಿಯನಟ ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ, ಕೃತಿಕಾ ದೇಶಪಾಂಡೆ, ರವಿಶಂಕರ್, ಅನುಷಾ ರೈ, ವಂಶಿಕೃಷ್ಣ, ಅಪೂರ್ವ, ತನಿಶಾ, ಪ್ರೇರಣಾ ಕಂಬಂ, ಕಿರಣ್ ನಾಯಕ್, ಕಿಶೋರ್, ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ, ಅಶ್ವಿನಿ, ನಟ ಪೃಥ್ವಿ ಅಂಬರ್, ಬಿರಾದಾರ್ ಹಾಗೂ ಬಾಲನಟಿ ಆರಾಧ್ಯ ಹಾಗೂ ಇತರರು ಅಭಿನಯಿಸಿದ್ದಾರೆ.