ದರ್ಶನ್ ಜಾಮೀನು ಅರ್ಜಿ ಸೋಮವಾರಕ್ಕೆ ಮುಂದೂಡಿದ ಬೆನ್ನಲ್ಲೇ, ಪವಿತ್ರಾ ಗೌಡ (Pavithra Gowda) ಜಾಮೀನು ಅರ್ಜಿ ವಿಚಾರಣೆ ಕೂಡ ಅದೇ ದಿನಕ್ಕೆ ಮುಂದೂಡಲಾಗಿದೆ. ಪವಿತ್ರಾ ಗೌಡ ಪರ ವಕೀಲರು ಇಂದು ವಾದ ಮಂಡಿಸಿದರು. ಪವಿತ್ರಾ ಗೌಡ ಪಾತ್ರ ಏನೂ ಇಲ್ಲ ಅಂತ ವಾದಿಸಿದರು. ಸೋಮವಾರ ಪ್ರತಿವಾದ ಮಾಡುವುದಾಗಿ ಸರಕಾರಿ ವಕೀಲರು ಮನವಿ ಮಾಡಿಕೊಂಡರು. ಹಾಗಾಗಿ ಸೆಪ್ಟಂಬರ್ 30ಕ್ಕೆ ಅರ್ಜಿ ವಿಚಾರಣೆ ಮುಂದೂಡಲಾಗಿದೆ. ಸಹಜವಾಗಿಯೇ ಪವಿತ್ರಾ ಗೌಡಗೆ ನಿರಾಸೆಯಾಗಿದೆ.
ಇವತ್ತು ತಮಗೆ ಜಾಮೀನು ಸಿಕ್ಕೇ ಸಿಗತ್ತೆ ಅಂತ ಕನಸು ಕಾಣುತ್ತಿದ್ದ ದರ್ಶನ್ ಗೆ ಮತ್ತೆ ನಿರಾಸೆಯಾಗಿದೆ. ಜಾಮೀನು ಅರ್ಜಿಗೆ ಇಂದು ಎಸ್.ಪಿ.ಪಿ ಪ್ರಸನ್ನ ಕುಮಾರ್ ಆಕ್ಷೇಪಣೆ ಸಲ್ಲಿಸಿದ್ದರು. ಆಕ್ಷೇಪಣೆ ವಾದವನ್ನು ಸೋಮವಾರ ಮಂಡಿಸುವುದಾಗಿ ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. ಹಾಗಾಗಿ ಸೆಪ್ಟಂಬರ್ 30ಕ್ಕೆ ವಿಚಾರಣೆ ಮುಂದೂಡಲಾಯಿತು.
ದರ್ಶನ್ ಗೆ ಐಟಿ ಗ್ರಿಲ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ನಟ ದರ್ಶನ್ಗೆ (Darshan) ಸಂಕಷ್ಟಗಳ ಸರಮಾಲೆಯೇ ಎದುರಾಗುತ್ತಿದೆ. ರೇಣುಕಾಸ್ವಾಮಿ ಕೊಲೆ ಬಳಿಕ ಶವ ವಿಲೇವಾರಿ, ಸಾಕ್ಷ್ಯ ನಾಶಕ್ಕಾಗಿ ದರ್ಶನ್ ಲಕ್ಷ ಲಕ್ಷ ಕಾಸು ನೀಡುವ ಭರವಸೆ ನೀಡಿದ್ದರು. ಈ ಸಂಬಂಧ ಆದಾಯ ತೆರಿಗೆ (Income Tax) ಅಧಿಕಾರಿಗಳು ಬಳ್ಳಾರಿ ಜೈಲಿನಲ್ಲೇ (Ballari Jail) ಇಂದು ದರ್ಶನ್ರನ್ನು 7 ಗಂಟೆ ಕಾಲ ವಿಚಾರಣೆಗೆ ಒಳಪಡಿಸಿದರು.
ರೇಣುಕಾಸ್ವಾಮಿ ಕೊಲೆ ಆದ ಬಳಿಕ ಮನೆಯಲ್ಲಿ ಅಷ್ಟೊಂದು ಹಣ (Money) ಹೇಗೆ ಬಂತು? ಆ ಹಣ ಯಾರಿಗೆ ಸೇರಿದ್ದು? ಆ ಹಣವನ್ನು ನಿಮಗೆ ತಂದುಕೊಟ್ಟಿದ್ಯಾರು? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಐಟಿ ಅಧಿಕಾರಿಗಳು ದರ್ಶನ್ಗೆ ಕೇಳಿದ್ದಾರೆ. ಐಟಿ ಅಧಿಕಾರಿಗಳು ದರ್ಶನ್ ಅವರನ್ನು ವಿಚಾರಣೆ ಒಳಪಡಿಸುತ್ತಾರೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ದರ್ಶನ್ ಪರ ಅಡಿಟರ್ ಎಂ ಎಸ್ ರಾವ್ ಮತ್ತು ಅಸಿಸ್ಟೆಂಟ್ ಅರುಣ್ ಇಬ್ಬರು ಬೆಳಿಗ್ಗೆ 10:50 ಕ್ಕೆ ಜೈಲಿಗೆ ಬಂದಿದ್ದರು. ಎರಡು ಕಾರುಗಳಲ್ಲಿ ಆಗಮಿಸಿದ ಅಧಿಕಾರಿಗಳು ಮಧ್ಯಾಹ್ನ 12:20ಕ್ಕೆ ಜೈಲು ಪ್ರವೇಶಿಸಿ ಜೈಲು ಅಧೀಕ್ಷಕರ ಕೊಠಡಿಯಲ್ಲಿ ಸಿಸಿ ಕ್ಯಾಮರಾಗಳ ಕಣ್ಗಾವಲಿನಲ್ಲಿ ವಿಚಾರಣೆ ನಡೆಸಿದರು.
ಕೊಲೆ ಪ್ರಕರಣದಲ್ಲಿ ಬಳಿಕೆಯಾದ ಒಟ್ಟು ಹಣದ ಬಗ್ಗೆ ವಿಚಾರಣೆ ನಡೆಸಿದ ಐಟಿ ಅಧಿಕಾರಿಗಳು, ಹಣದ ಮೂಲದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಯಾವ ಅಕೌಂಟ್ಗಳ ಮೂಲಕ ಹಣ ವ್ಯವಹಾರ ನಡೆದಿದೆ ಎನ್ನುವದರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಒಂದು ಮಾಹಿತಿ ಪ್ರಕಾರ ಶವದ ವಿಲೇವಾರಿ ವಿಚಾರವಾಗಿ 30 ಲಕ್ಷ ರೂ., ದರ್ಶನ್ ಮನೆಯಲ್ಲಿ ಸೀಜ್ ಆಗಿದ್ದ 40 ಲಕ್ಷ ರೂ., ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ಸೀಜ್ ಆಗಿದ್ದ 3 ಲಕ್ಷ ರೂ., ಮೈಸೂರು ಹೊಟೇಲ್ನಲ್ಲಿ ಸೀಜ್ ಆಗಿದ್ದ 1 ಲಕ್ಷ ರೂ. ಸೇರಿ ಒಟ್ಟು 84 ಲಕ್ಷ ರೂ. ಹಣದ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಮಧ್ಯಾಹ್ನ 12:30 ರಿಂದ ಸಂಜೆ 7:30ರವರೆಗೆ ನಿರಂತರವಾಗಿ 7 ತಾಸುಗಳ ಕಾಲ ಐಟಿ ಅಧಿಕಾರಿಗಳು ಪ್ರಶ್ನೆ ಕೇಳಿ ಉತ್ತರ ಪಡೆದಿದ್ದಾರೆ. ಹಣದ ಮೂಲದ ಬಗ್ಗೆ ದರ್ಶನ್ ವಿವರಣೆ ನೀಡಿದ್ದು ಅದಕ್ಕೆ ಸೂಕ್ತ ದಾಖಲೆಗಳನ್ನು ಆಡಿಟರ್ ಸಲ್ಲಿಸಿದ್ದಾರೆ ಎನ್ನಲಾಗಿದೆ.