– ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆ
– ಮಾರುಕಟ್ಟೆಯ ವ್ಯಾಪಾರ, ವಹಿವಾಟು ಕುಸಿತ
ಕಲಬುರಗಿ: ದೇಶದಲ್ಲಿಯೇ ಕೊರೊನಾ ವೈರಸ್ಗೆ ಕಲಬುರಗಿಯಲ್ಲಿ ಮೊದಲ ಸಾವು ಸಂಭವಿಸಿದ್ದರೂ ಕಲಬುರಗಿ ಸಾರ್ವಜನಿಕರಿಗೆ ಕೊರೊನಾ ಭೀತಿ ಉಂಟಾಗಿಲ್ಲ ಅನ್ನುವಂತಿದೆ.
ಜನರು ಕೆಲ ದಿನಗಳವರೆಗೆ ಮನೆ ಬಿಟ್ಟು ಹೊರ ಬರಬೇಡಿ ಅಂತ ಶನಿವಾರ ಜಿಲ್ಲಾಧಿಕಾರಿಗಳು ಜನರಿಗೆ ಮನವಿ ಮಾಡಿದ್ದರು. ಅಲ್ಲದೆ ಪಾರ್ಕ್, ಮಾಲ್, ಥಿಯೇಟರ್ಗಳನ್ನು ಮುಚ್ಚಲು ಸಹ ಆದೇಶ ಮಾಡಿದ್ದರು. ಇದನ್ನೂ ಓದಿ: ತುರ್ತು ಪರಿಸ್ಥಿತಿ ಬಿಟ್ಟು ಮನೆಯಿಂದ ಹೊರ ಬರಬೇಡಿ- ಕಲಬುರಗಿ ಡಿಸಿ ಮನವಿ
ಹೀಗಾಗಿ ನಗರದ ಪಾರ್ಕ್ ಗಳಿಗೆ ಪ್ರವೇಶ ನಿಷೇಧಿಸಿ ಬೀಗ ಹಾಕಲಾಗಿದೆ. ಆದರೂ ಜನ ಮಾತ್ರ ತಲೆ ಕಡೆಸಿಕೊಳ್ಳುತ್ತಿಲ್ಲ. ಪಾರ್ಕಿನ ಹಿಂಬದಿಯ ಗೇಟ್ ಮೂಲಕ ಒಳ ಬಂದು ವಾಕಿಂಗ್, ಯೋಗವನ್ನು ಮಾಡುತ್ತಿದ್ದಾರೆ.
ಇದಕ್ಕೆ ಕೆಲ ಪ್ರಜ್ಞಾವಂತ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಜನರ ಹಿತಕ್ಕಾಗಿ ಈ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಇದಕ್ಕೆ ನಾವು ಸಹ ಕೈಜೋಡಿಸಿದಾಗ ಮಾತ್ರ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸಬಹುದು ಎಂದು ಪಬ್ಲಿಕ್ ಟಿವಿ ಬಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾರುಕಟ್ಟೆಯ ವ್ಯಾಪಾರ, ವಹಿವಾಟು ಕುಸಿತ:
ಕಲಬುರಗಿಗೆ ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಕಲಬುರಗಿ ನಗರಕ್ಕೆ ಮತ್ತು ಜಿಲ್ಲೆಗೆ ತರಕಾರಿ, ಹಾಲು ಮತ್ತು ಆಹಾರ ಸಾಮಾಗ್ರಿಗಳನ್ನು ಪೂರೈಕೆ ಮಾಡುವ ಕಣೀ ಮಾರುಕಟ್ಟೆಯಲ್ಲಿ ವ್ಯಾಪಾರ ಮತ್ತು ವಹಿವಾಟು ಕುಸಿತ ಕಂಡಿದೆ.
ಸದಾ ಜನಸಂದಣಿಯಿಂದ ಮತ್ತು ನಡೆದಾಡಲು ಸಹ ಜಾಗವಿರದಷ್ಟು ಕಿಕ್ಕಿರಿದು ಸೇರುತ್ತಿದ್ದ ಜನ ಈಗ ಇತ್ತ ಕಡೆ ಮುಖ ಮಾಡುತ್ತಿಲ್ಲ. ಅಗತ್ಯ ಸಾಮಾಗ್ರಿಗಳನ್ನು ಖರೀದಿಸಲು ಎರಡು ಗಂಟೆ ಮಾತ್ರ ಅವಕಾಶ ನೀಡಲಾಗಿದೆ. ಹೀಗಾಗಿ ಬೆರಳೆಣಿಕೆಯಷ್ಟು ಜನ ಮಾರುಕಟ್ಟೆಯತ್ತ ಆಗಮಿಸಿ ತರಕಾರಿಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತ ನಿರ್ಧಾರಕ್ಕೆ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದರೆ, ಗ್ರಾಹಕರು ಜಿಲ್ಲಾಡಳಿತ ಕ್ರಮವನ್ನು ಸ್ವಾಗತಿಸಿದ್ದಾರೆ.