ಅಗರ್ತಲಾ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತ್ರಿಪುರದ ಸಿಮ್ನಾ ನಗರದ ಸೊನಾಯಿ ಬೈರಾಗಿ ಸಾದು ಪರಾ ಪ್ರದೇಶದಲ್ಲಿ ನಡೆದಿದೆ.
ಪರೇಶ್ ತಂತಿ, ಪತ್ನಿ ಸಂಧಾ ತಂತಿ ಹಾಗೂ ಮಕ್ಕಳಾದ ಬಿಶಾಲ್ ಮತ್ತು ರೂಪಾಲಿ ಮೃತರು. ಮನೆಯೊಳಗೆ ಮಕ್ಕಳಿಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಮಕ್ಕಳು ವಿಷ ಸೇವಿಸಿದ್ದಾರೆ ಎಂದು ಶಂಕಿಸಲಾಗಿದೆ. ಅವರ ಪೋಷಕರ ಮೃತದೇಹಗಳು ಮನೆಯ ಪಕ್ಕದಲ್ಲಿದ್ದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ದಂಪತಿ ಜಮೀನಿನ ವಿಚಾರವಾಗಿ ಆಗಾಗ ಜಗಳವಾಡುತ್ತಿದ್ದರು. ಹೀಗಾಗಿ ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬದ ಸಂಬಂಧಿಕರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸಿಧೈ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ತನಿಖೆಯನ್ನು ಮುಂದುವರಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ಅಮಿತಾಭ ಪಾಲ್ ತಿಳಿಸಿದ್ದಾರೆ.