ಬೆಂಗಳೂರು: ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ಇನ್ನೂ ಉಪಮುಖ್ಯಮಂತ್ರಿ ಪದವಿ ಗುಂಗಲ್ಲೇ ಇದ್ದು, ಮೈತ್ರಿ ಬಿದ್ದು ಅಧಿಕಾರ ಕಳೆದುಕೊಂಡರೂ ತಮ್ಮ ಹುದ್ದೆಯ ಜಪವನ್ನೇ ಮಾಡುತ್ತಿದ್ದಾರೆ.
ಶುಕ್ರವಾರ ಬಿ.ಎಸ್ ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದೆ. ಆದರೆ ಪರಮೇಶ್ವರ್ ಮಾತ್ರ ಇನ್ನೂ ಉಪಮುಖ್ಯಮಂತ್ರಿ ಬೋರ್ಡ್ ತೆಗೆಸಿಲ್ಲ. ಪರಮೇಶ್ವರ್ ಅಧಿಕಾರ ಕಳೆದುಕೊಂಡರೂ ಉಪಮುಖ್ಯಮಂತ್ರಿ ಎಂದು ತಮ್ಮ ಮನೆಯ ಮುಂದೆ ಬೋರ್ಡ್ ಇದೆ.
ಪರಮೇಶ್ವರ್ ತಮ್ಮ ಸದಾಶಿವನಗರದ ಸರ್ಕಾರಿ ನಿವಾಸದ ಮುಂದೆ ಉಪಮುಖ್ಯಮಂತ್ರಿ ಎಂದು ಬರೆದಿರುವ ಬೋರ್ಡ್ ಹಾಕಿಕೊಂಡಿದ್ದಾರೆ. ಮೈತ್ರಿ ಸರ್ಕಾರ ಬಿದ್ದು 5 ದಿನ ಕಳೆದಿದೆ. ಆದರೂ ಬೋರ್ಡ್ ತೆಗೆದಿಲ್ಲ. ಡಾ.ಜಿ ಪರಮೇಶ್ವರ್, ಉಪಮುಖ್ಯಮಂತ್ರಿ, ಕರ್ನಾಟಕ ಸರ್ಕಾರ ಬೆಂಗಳೂರು ಎಂಬ ಬೋರ್ಡ್ ರಾರಾಜಿಸುತ್ತಿದೆ. ಸದ್ಯಕ್ಕೆ ಪರಮೇಶ್ವರ್ ಅವರು ಎಲ್ಲಿಗೂ ತೆರಳದೇ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಅಧಿಕಾರಿ ವಹಿಸಿಕೊಂಡಿದ್ದರು. ಈ ವೇಳೆ ಉಪಮುಖ್ಯಮಂತ್ರಿಯಾಗಿ ಡಾ.ಜಿ ಪರಮೇಶ್ವರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಸಮ್ಮಿಶ್ರ ಸರ್ಕಾರ ವಿಶ್ವಾಸ ಮತಯಾಚನೆಯಲ್ಲಿ ಬಹುಮತ ಕಳೆದುಕೊಂಡು ಅಧಿಕಾರದಿಂದ ಕೆಳಗಿಳಿದಿದೆ. ಹೀಗಾಗಿ ಡಿಸಿಎಂ ಹುದ್ದೆಯನ್ನು ಪರಮೇಶ್ವರ್ ಅವರು ಕಳೆದುಕೊಂಡಿದ್ದಾರೆ.