ಕಲಬುರಗಿ: ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಸುನಾಮಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ಹೇಳಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದಲ್ಲಿ (Kalaburagi Airport) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶದಲ್ಲಿ ಮೋದಿ ಅವರ ಸುನಾಮಿ ಇದೆ. ದೇಶದ ಜನ ಮೋದಿ ಅವರ ಅಧಿಕಾರದಲ್ಲಿ ಹೊಸ ಕನಸು ಕಾಣುತ್ತಿದ್ದಾರೆ. ಈ ಬಾರಿ ರಾಜ್ಯದಲ್ಲಿ 25 ಸ್ಥಾನ ಬಿಜೆಪಿ ಗೆಲ್ಲುತ್ತದೆ. ಮೋದಿ ಸುನಾಮಿ ತಡೆಯಲು ಯಾರಿಂದಲೂ ಆಗಲ್ಲ. ಯಾವ ಗೋಡೆ ಡ್ಯಾಂ ಸಹ ಈ ಸುನಾಮಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಸತ್ತಿನಲ್ಲಿ ಒಂದು ಸೀಟ್ ಕಡಿಮೆ ಆದರೂ ರಾಜಸ್ಥಾನ ಆಗುವ ಬಗ್ಗೆ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದರು, ಅದು ಅವರ ವೈಯಕ್ತಿಕ ಹೇಳಿಕೆಯಾಗಿದೆ. ನಮ್ಮ ಅಧ್ಯಕ್ಷರು 28 ಸ್ಥಾನ ಬರುವುದಾಗಿ ಹೇಳಿದ್ದಾರೆ ಎಂದರು. ಇದನ್ನೂ ಓದಿ: BSY ವಿರುದ್ಧ ಆರೋಪದ ನಡುವೆಯೇ ವಿಜಯಪುರಕ್ಕೆ ವಿಜಯೇಂದ್ರ ಭೇಟಿ- ಜಿಲ್ಲಾ ಬಿಜೆಪಿಯಲ್ಲಿ ಸಂಚಲನ
ಇದೇ ವೇಳೆ 9 ಮಂದಿ ಕಾಂಗ್ರೆಸ್ ಸಚಿವರು ಲೋಕಸಭಾ ಚುನಾವಣೆ (Loksabha Election) ನಿಲ್ಲಲು ಹಿಂದೇಟು ಹಾಕುತ್ತಾರೆ ಎಂಬ ವಿಚಾರದ ಕುರಿತು ಮಾತನಾಡಿದ ಸೂರ್ಯ, ಸದ್ಯ ಮೋದಿ ಸುನಾಮಿಯಲ್ಲಿ ಯಾವ ಸಚಿವರು ಗೆಲ್ಲುವುದಿಲ್ಲ. ಹಗಲು ಕಂಡ ಬಾವಿಯಲ್ಲಿ ಯಾರಾದ್ರು ರಾತ್ರಿ ಬಿಳ್ತಾರಾ..?, ಈ ಬಾರಿ ಲೋಕಸಭಾ ಚುನಾವಣೆ ಸಹ ಕಾಂಗ್ರೆಸ್ ನವರಿಗೆ ಹಗಲು ಕಂಡ ಬಾವಿಯಂತಾಗಿದೆ. ಹೀಗಾಗಿ ಕಾಂಗ್ರೆಸ್ ಸಚಿವರು ಲೋಕಸಭೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದರು.