– ನನ್ನ ಮಗ ಅಪ್ಪನ ಜೊತೆ ಇರಬೇಕೆಂದು ಅಳುತ್ತಾನೆ ಎಂದ ಪತ್ನಿ
– ನನ್ನ ತಾಳಿ ಕಿತ್ತುಕೊಂಡು ಅನ್ಯಾಯ ಮಾಡುತ್ತಿದ್ದೀರಾ?
ನವದೆಹಲಿ: ನಿರ್ಭಯಾ ಹಂತಕರನ್ನು ಇಂದು ಬೆಳಗ್ಗೆ 5.30ಕ್ಕೆ ಗಲ್ಲಿಗೇರಿಸಲಾಯಿತು. ಈ ಸುದ್ದಿ ಕೇಳಿ ದೇಶ್ಯಾದ್ಯಂತ ಜನರು ಸಂಭ್ರಮಿಸುತ್ತಿದ್ದಾರೆ. ಇದರ ನಡುವೆ ಅಪರಾಧಿ ಅಕ್ಷಯ್ ಠಾಕೂರ್ ತಾಯಿ ಹಾಗೂ ಪತ್ನಿ ಮಾತನಾಡಿದ ವಿಡಿಯೋವೊಂದು ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ, ದಯವಿಟ್ಟು ನನ್ನ ಮಗನನ್ನು ಗಲ್ಲಿಗೇರಿಸಬೇಡಿ. ಅವನು ಕೋರ್ಟ್ ಹಾಗೂ ಪೊಲೀಸ್ ಠಾಣೆಯಲ್ಲಿ ಈಗ ಹೇಗಿದ್ದಾನೋ ಹಾಗೆ ಇರಲಿ. ಅವನು ಜೈಲಿನಲ್ಲಿಯೇ ಕ್ಷೇಮವಾಗಿರಲಿ. ನಾಲ್ವರು ಅಪರಾಧಿಗಳ ಕುಟುಂಬವನ್ನು ಗಲ್ಲಿಗೇರಿಸಿ ಎಂದು ನಾನು ಸರ್ಕಾರ ಬಳಿ ಕೇಳಿಕೊಳ್ಳುತ್ತೇನೆ. ನಮ್ಮನ್ನು ಯಾಕೆ ಇನ್ನೂ ಜೀವಂತವಾಗಿ ಇಟ್ಟಿದ್ದೀರಾ? ಈಗ ನಾವು ಬದುಕಿ ಏನು ಮಾಡಬೇಕಿದೆ. ಅಕ್ಷಯ್ ನ ನೋಡಿದರೆ ನಾವೇಕೆ ಇನ್ನೂ ಬದುಕಿದ್ದೇವೆ ಎಂದು ಎನಿಸುತ್ತೆ ಎಂದು ಅಕ್ಷಯ್ ತಾಯಿ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಕೊಟ್ಟ ಮಾತು ಉಳಿಸಿಕೊಂಡ ಜಗ್ಗೇಶ್- ನಿರ್ಭಯಾ ಹಂತಕರ ಹ್ಯಾಂಗ್ಮ್ಯಾನ್ಗೆ 1 ಲಕ್ಷ ರೂ.
ನಾವು ಬಡವರು ಎಂದು ಸರ್ಕಾರ ನಮಗೆ ಕಿರುಕುಳ ನೀಡುತ್ತಿದೆ. ಅಕ್ಷಯ್ಗೆ ಪತ್ನಿ-ಮಗ, ವಯಸ್ಸಾದ ತಂದೆ-ತಾಯಿ ಇದ್ದಾರೆ. ಅಕ್ಷಯ್ಗೆ ಗಲ್ಲು ಹಾಕಿದರೆ ಅವರ ಕುಟುಂಬಸ್ಥರು ಎಲ್ಲಿಗೆ ಹೋಗಬೇಕು ಎಂಬುದು ಸರ್ಕಾರಕ್ಕೆ ಗೊತ್ತಿಲ್ಲ. ಬಡತನ ಬಿಟ್ಟರೆ ನಮಗೆ ಇನ್ನೇನು ಇಲ್ಲ. ಸರ್ಕಾರ ಬಡವರಿಗೆ ಸಹಾಯ ಮಾಡುವುದರ ಬದಲು ನನ್ನ ಮಗನಿಗೆ ಗಲ್ಲು ಹಾಕುತ್ತಿದ್ದಾರೆ. ಗಲ್ಲಿಗೇರಿಸುವಿಕೆಯ ವಿರುದ್ಧ ಯಾರೂ ಏನನ್ನೂ ಕೇಳಲು ಬಯಸುವುದಿಲ್ಲ. ಬದಲಿಗೆ ಅವರು ಅವನನ್ನು ಶಿಕ್ಷಿಸಬಹುದು ಎಂದರು. ಇದನ್ನೂ ಓದಿ: ಗಲ್ಲು ವಿಧಿಸುವ ಪ್ರಕ್ರಿಯೆ ಹೇಗಿತ್ತು? ಗಲ್ಲು ಶಿಕ್ಷೆಗೆ ಒಳಗಾದವರ್ಯಾರು?
ನನ್ನ ಮಗ ಜೈಲಿನಲ್ಲಿದ್ದರೆ, ನನಗೆ ಸಮಾಧಾನ ಆಗುತ್ತಿತ್ತು. ಅಲ್ಲದೆ ನನ್ನ ಸೊಸೆ ಕೂಡ ವಿಧವೆ ಆಗುತ್ತಿರಲಿಲ್ಲ. ದಯವಿಟ್ಟು ನನ್ನ ಮಗನಿಗೆ ಗಲ್ಲಿಗೆ ಹಾಕಬೇಡಿ ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ನನ್ನ ಮಗ ಪೊಲೀಸ್ ಠಾಣೆಯಲ್ಲಿ ಹಾಗೂ ಕೋರ್ಟಿನಲ್ಲಿ ಹೇಗೆ ಇದ್ದಾನೋ ಹಾಗೇ ಇರಲಿ. ದಯವಿಟ್ಟು ಆತನನ್ನು ಜೈಲಿನಲ್ಲಿಯೇ ಸುರಕ್ಷಿತವಾಗಿ ನೋಡಿಕೊಳ್ಳಿ. ನನ್ನ ಮಗ ಜೈಲಿನಲ್ಲಿಯೇ ಇರುವಂತೆ ಮಾಡಿ. ಆಗ ನನಗೆ ಬದುಕಲು ಸಾಧ್ಯವಾಗುತ್ತದೆ. ಇಲ್ಲವೆಂದರೆ ಈ ಪ್ರಪಂಚದಲ್ಲಿ ಬದುಕಿ ನಾವೇನು ಮಾಡಬೇಕಿದೆ? ನಾನು ಸರ್ಕಾರದ ಬಳಿ ನನ್ನ ಮಗನನ್ನು ಕೇಳುತ್ತೇನೆ. ನನ್ನ ಮಗ ಸರಿ ಹೋಗುತ್ತಾನೆ ಎಂದು ತಿಳಿಸಿದ್ದರು. ಇದನ್ನೂ ಓದಿ: ನಿರ್ಭಯಾ ಪ್ರಕರಣ- 2012ರಿಂದ 2020ರವರೆಗೆ ಏನೇನಾಯ್ತು?
ಇದೇ ವೇಳೆ ಅಕ್ಷಯ್ ಪತ್ನಿ ಮಾತನಾಡಿ, ನನ್ನ ಮಗ ಬೇರೆ ಮಕ್ಕಳು ತನ್ನ ತಂದೆ ಜೊತೆ ಇರುವುದನ್ನು ನೋಡಿ ತುಂಬಾ ಅಳುತ್ತಾನೆ. ನಾನು ನನ್ನ ತಂದೆ ಜೊತೆ ಹೀಗೆ ಇರಬೇಕು ಎಂದು ಹೇಳುತ್ತಾನೆ. ಆದರೆ ಹಣದ ಸಮಸ್ಯೆಯಿದ್ದ ಕಾರಣ ನನಗೆ ನನ್ನ ಪತಿಯನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಬಳಿಕ ಸಾಲ ಮಾಡಿ ನನ್ನ ಮಗನಿಗೆ ಜೈಲಿಗೆ ಕರೆದುಕೊಂಡು ಹೋಗಿ ಇವರೇ ನಿಮ್ಮ ತಂದೆ ಎಂದು ಹೇಳಿದೆ. ನನ್ನ ಮಗ ತನ್ನ ತಂದೆಯನ್ನು ನೋಡಿ ತುಂಬಾ ಖುಷಿಪಟ್ಟನು. ಬಳಿಕ ನಾವು ಅಲ್ಲಿಂದ ಹೊರಡಬೇಕಾದರೆ ತುಂಬಾ ಹೊತ್ತು ಅಳುತ್ತಿದ್ದನು. ಅಪ್ಪ ಕೂಡ ನಮ್ಮ ಜೊತೆ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ ಅಮ್ಮ ಎಂದು ಹೇಳುತ್ತಾ ನನ್ನ ಮಗ ಅಳುತ್ತಿದ್ದನು ಎಂದರು.
ಅಲ್ಲದೆ ನಾನು ಕೂಡ ನ್ಯಾಯ ಕೇಳುತ್ತಿದ್ದೇನೆ. ನನ್ನ ತಾಳಿಯನ್ನು ಕಿತ್ತುಕೊಳ್ಳುವ ಮೂಲಕ ನನಗೆ ಅನ್ಯಾಯ ಮಾಡಲಾಗುತ್ತಿದೆ. ನನಗೆ ಮುತ್ತೈದೆ ಆಗಿರಬೇಕು ಎಂಬ ಆಸೆ ಇದೆ. ನಾನು ಕೂಡ ಈ ದೇಶದ ಮಹಿಳೆ. ನನಗೆ ಮಾತ್ರ ಅನ್ಯಾಯ ಮಾಡುತ್ತಿದ್ದಾರೆ. ನನಗೆ ನ್ಯಾಯ ಬೇಕಿದೆ ಎಂದು ತಿಳಿಸಿದ್ದರು.