ಮಂಡ್ಯ: ಪುತ್ರ ನಿಖಿಲ್ ನಾಮಿನೇಷನ್ಗೆ ಯಾವುದೇ ವಿಘ್ನ ಆಗದಿರಲು ಸಿಎಂ ಕುಮಾರಸ್ವಾಮಿ ಅವರು ಕಸರತ್ತು ಮಾಡಿದ್ದು, ಈ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಸಂಪೂರ್ಣವಾಗಿ ವಿದ್ಯುತ್ ಸಂಪರ್ಕ ಇರಬೇಕು ಎಂದು ಆದೇಶ ಹೊರಡಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಸಿಎಂ ಕಟ್ಟಪ್ಪಣೆ ಮಾಡಿದ್ದಾರೆ. ಸಿಎಂ ಕುಮಾರಸ್ವಾಮಿ ಸೂಚನೆ ಹಿನ್ನೆಲೆಯಲ್ಲಿ ಮಂಡ್ಯ ಎಸ್.ಪಿ. ಶಿವಪ್ರಕಾಶ್ ದೇವರಾಜ್ ಅವರು ಚೆಸ್ಕಾಂಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?
ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ಬೆಂಗಳೂರಿನಿಂದ ಹೊರಟು ಮಂಡ್ಯ ತಲುಪಿ ಮಂಡ್ಯ ಲೋಕಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿಯಾದ ಶ್ರೀ ನಿಖಿಲ್ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ವಾಪಸ್ ಬೆಂಗಳೂರಿಗೆ ತಲುಪಲಿದ್ದಾರೆ. ಮೇಲ್ಕಂಡ ಪ್ರವಾಸದ ಸಮಯದಲ್ಲಿ ಮಂಡ್ಯ ನಗರದಲ್ಲಿ ಈ ದಿನದಂದು ಅನಿಯಮಿತ ವಿದ್ಯುತ್ ಸರಬರಾಜಿನ ಅವಶ್ಯಕತೆ ಇರುತ್ತದೆ.
ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳ ಪ್ರವಾಸದ ಸಮಯದಲ್ಲಿ ಮದ್ದೂರು ಮತ್ತು ಮಂಡ್ಯ ಪ್ರವಾಸಿ ಮಂದಿರಗಳಲ್ಲಿ, ಸರ್ಕಾರಿ ಆಸ್ಪತ್ರೆ ಮತ್ತು ಸಮಾರಂಭ ನಡೆಯುವ ಮಂಡ್ಯ ನಗರದಲ್ಲಿ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಅನಿಯಮಿತ ವಿದ್ಯುತ್ ಅನ್ನು ಸರಬರಾಜು ಮಾಡಬೇಕು. ಸದರಿ ಸ್ಥಳಗಳಲ್ಲಿ ನಿಮ್ಮ ಇಲಾಖೆಯ ಜವಾಬ್ದಾರಿಯುತ ಹಾಗೂ ನುರಿತ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ನಿಯೋಜಿಸಿಕೊಡಬೇಕು. ಜೊತೆಗೆ ಪ್ರತ್ಯೇಕವಾಗಿ ಜನರೇಟರ್ನ ವ್ಯವಸ್ಥೆಯನ್ನು ಸಹ ಏರ್ಪಡಿಸುವಂತೆ ಈ ಮೂಲಕ ಕೋರಲಾಗಿದೆ.