ಚಿಕ್ಕಬಳ್ಳಾಪುರ: ನ್ಯೂ ಇಯರ್ ಸೆಲೆಬ್ರೇಷನ್ (New Year) ಪಾರ್ಟಿ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಸ್ನೇಹಿತನನ್ನು ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಚಿಂತಾಮಣಿ ತಾಲೂಕು ಐಮರೆಡ್ಡಿಹಳ್ಳಿ ಬಳಿ ನಡೆದಿದೆ.
ದೊಡ್ಡ ಗಂಜೂರು ಗ್ರಾಮದ ನವೀನ್ (30) ಕೊಲೆಯಾದ ಯುವಕ. ಸ್ನೇಹಿತರೆಲ್ಲಾ ಸೇರಿ ಕಳೆದ ರಾತ್ರಿ ದೊಡ್ಡ ಗಂಜೂರು ಗ್ರಾಮದ ಬಳಿ ನ್ಯೂ ಇಯರ್ ಸೆಲೆಬ್ರೇಷನ್ ಸಂಬಂಧ ಕೇಕ್ ಕಟ್ ಮಾಡಿ ಕಂಠಪೂರ್ತಿ ಕುಡಿದು ಮೋಜಿ ಮಸ್ತಿ ಮಾಡಿದ್ದಾರೆ. ಕೇಕ್ ಕಟ್ ಮಾಡಿದ ನಂತರ ಐಮರೆಡ್ಡಿಹಳ್ಳಿ ಗ್ರಾಮದ ಬಳಿ ಇರುವ ಡಾಬಾ ಒಂದರಲ್ಲಿ ಮತ್ತೆ ಮದ್ಯಪಾನ ಮಾಡಿ ಪಾರ್ಟಿ (Party) ಮಾಡಿಕೊಂಡಿದ್ದಾರೆ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದ್ದು ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಪುನೀತ್ ಬಿಯರ್ ಬಾಟಲಿಯಿಂದ ನವೀನ್ ತಲೆಗೆ ಹಲ್ಲೆ ಮಾಡಿದ್ದು ತೀವ್ರ ರಕ್ತಸ್ರಾವವಾಗಿ ನವೀನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಹೊಸ ವರ್ಷ ಪಾರ್ಟಿ – ಕಟ್ಟಡದಿಂದ ಬಿದ್ದು ಯುವಕ ಸಾವು
ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮೃತದೇಹವನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಮೂವರು ಆರೋಪಿಗಳಾದ ದೊಡ್ಡ ಗಂಜೂರು ಗ್ರಾಮದ ಅರ್ಜುನ್, ಚೇತನ್, ಹಾಗೂ ಪುನೀತ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಹೊಸ ವರ್ಷಾಚರಣೆ ನಡುವೆ ಮೈಮರೆತ ಪ್ರೇಮಿಗಳು – ರಸ್ತೆ ಬ್ಲಾಕ್ಮಾಡಿ ನೋಡ್ಕೊಂಡು ನಿಂತಿದ್ದವರ ಮೇಲೆ ಲಾಠಿಚಾರ್ಜ್