ಕಲಬುರಗಿ: ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಮಾರಾಟ ಇನ್ನೂ ಇದೆಯಾ ಎಂಬ ಪ್ರಶ್ನೆ ಇದೀಗ ಮತ್ತೆ ಶುರುವಾಗಿದೆ. ಯಾಕಂದ್ರೆ ಚಿತ್ತಾಪುರ ತಾಲೂಕಿನ ಭಂಕೂರ ಗ್ರಾಮದ ಪಿಎಚ್ಸಿ ಕೇಂದ್ರದ ಸ್ಟಾಫ್ ನರ್ಸ್ ಕವಿತಾ ಮನೆಯಲ್ಲಿ ಎರಡು ನವಜಾತ ಅವಳಿ-ಜವಳಿ ಹೆಣ್ಣು ಶಿಶುಗಳು ಪತ್ತೆಯಾಗಿವೆ.
ಮದುವೆಯಾಗಿ 15 ವರ್ಷ ಕಳೆದಿದ್ದರೂ ಕವಿತಾ ಅವರಿಗೆ ಮಕ್ಕಳಾಗಿಲ್ಲ. ಹೀಗಾಗಿ ಈ ಎರಡು ಶಿಶುಗಳನ್ನು ಖರೀದಿಸಿ ಸಾಕುತ್ತಿದ್ದಾರೆ ಎಂಬ ಮಾಹಿತಿಯಿದೆ. ಆದ್ರೆ ಈ ಶಿಶುಗಳನ್ನು ಎಲ್ಲಿಂದ ತರಲಾಯಿತ್ತು? ಎಷ್ಟು ಹಣ ಕೊಟ್ಟು ಖರೀದಿಸಿದ್ದರು ಎಂಬ ಹತ್ತು ಹಲವು ಪ್ರಶ್ನೆ ಇದೀಗ ಎದುರಾಗಿದೆ.
ಮಕ್ಕಳ ಮಾರಾಟ ಶಂಕೆ ಹಿನ್ನಲೆಯಲ್ಲಿ ಚೈಲ್ಡ್ ಲೈನ್ಗೆ ಅನಾಮಧೆಯ ಕರೆ ಬಂದಿತ್ತು. ಕರೆ ಸ್ವೀಕರಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ಮಕ್ಕಳ ರಕ್ಷಣೆ ಮಾಡಿದ್ದಾರೆ.
ಹಲವು ವರ್ಷಗಳಿಂದ ಮಕ್ಕಳಾಗದ ಹಿನ್ನಲೆಯಲ್ಲಿ ಶಿಶುಗಳನ್ನ ತಂದಿಟ್ಟುಕೊಂಡಿರುವುದಾಗಿ ನರ್ಸ್ ಹೇಳಿಕೆ ನೀಡಿದ್ದರು. ಆದರೆ ಅಧಿಕಾರಿಗಳ ವಿಚಾರಣೆ ವೇಳೆ ನರ್ಸ್ ತದ್ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಒಮ್ಮೆ ಬೀದರ್ನಿಂದ ಮತ್ತೊಮ್ಮೆ ವಿಜಯಪುರದಿಂದ ಶಿಶುಗಳನ್ನ ತಂದಿರುವುದಾಗಿ ಹೇಳಿದ್ದಾರೆ. ನರ್ಸ್ ನ ತದ್ವಿರುದ್ಧ ಹೇಳಿಕೆಯಿಂದ ಅಧಿಕಾರಿಗಳಿಗೆ ಅನುಮಾನ ಮೂಡಿದೆ.
ಗಡಿ ಜಿಲ್ಲೆಗಳಲ್ಲಿ ಮಕ್ಕಳ ಮಾರಾಟ ಶಂಕೆ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಶಿಶುಗಳನ್ನ ಕಲಬುರಗಿಯ ಅಮುಲ್ಯ ಶಿಶುಗೃಹಕ್ಕೆ ಹಸ್ತಾಂತರ ಮಾಡಲಾಗಿದೆ. ಶಹಬಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.