ಲಕ್ನೋ: ರಾಜವಂಶಗಳು ಯಾವಾಗಲೂ ತಮ್ಮ ಸ್ವಹಿತಾಸಕ್ತಿಗಳನ್ನು ಪೂರೈಸಲು ಅವಕಾಶ ಹುಡುಕುತ್ತಿರುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.
ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯ ಕೊನೆಯ ಹಂತದ ಪ್ರಚಾರದ ವೇಳೆ ಪ್ರಧಾನಿ ಮೋದಿ ಉಕ್ರೇನ್ ಬಿಕ್ಕಟ್ಟನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವ ರಾಜಕೀಯ ನಾಯಕರ ವಿರುದ್ಧ ಸಿಡಿದರು. ಈ ಕುರಿತು ಮಾತನಾಡಿದ ಅವರು, ರಾಜವಂಶಗಳು ಯಾವಾಗಲೂ ತಮ್ಮ ಸ್ವಹಿತಾಸಕ್ತಿಗಳನ್ನು ಪೂರೈಸಲು ಅವಕಾಶಗಳನ್ನು ಹುಡುಕುತ್ತವೆ. ನಿರಂತರ ವಿರೋಧ, ತೀವ್ರ ಹತಾಶೆ ಮತ್ತು ಋಣಾತ್ಮಕತೆ ಅವರ ರಾಜಕೀಯ ಸಿದ್ಧಾಂತವಾಗಿದೆ ಎಂದು ಟೀಕಿಸಿದರು. ಇದನ್ನೂ ಓದಿ: ತನ್ನದೇ ದೇಶದ ಸಂಧಾನಕರನನ್ನು ಹತ್ಯೆಗೈದ ಉಕ್ರೇನ್
ರಾಷ್ಟ್ರವು ಸವಾಲುಗಳನ್ನು ಎದುರಿಸುವಾಗಲೂ ವಿರೋಧ ಪಕ್ಷಗಳು ರಾಜಕೀಯ ಹಿತಾಸಕ್ತಿಗಳನ್ನು ನೋಡುತ್ತವೆ. ಪರಿಸ್ಥಿತಿಯನ್ನು ಇನ್ನಷ್ಟು ಕ್ಲಿಷ್ಟಕರಗೊಳಿಸುತ್ತವೆ. ದೇಶದ ಮುಂದೆ ಕೆಲವು ಸವಾಲುಗಳು ಬಂದಾಗ, ಈ ರಾಜವಂಶಗಳು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಹುಡುಕುತ್ತವೆ. ಭಾರತದ ಭದ್ರತಾ ಪಡೆಗಳು ಮತ್ತು ಜನರು ಬಿಕ್ಕಟ್ಟನ್ನು ಎದುರಿಸಿದರೆ, ವಿರೋಧ ಪಕ್ಷಗಳು ಅದನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತವೆ. ಈಗ ಇರುವ ಪರಿಸ್ಥಿತಿಗಳನ್ನು ಇನ್ನಷ್ಟು ಬಿಕ್ಕಟ್ಟು ಮಾಡುತ್ತಿದ್ದಾರೆ. ಹಿಂದೆ ಕೊರೊನಾ ಸಮಯದಲ್ಲಿ ಇದೇ ರೀತಿ ಮಾಡಿದ್ದರೂ, ಇಂದು ಉಕ್ರೇನ್ ಬಿಕ್ಕಟ್ಟಿನ ಸಮಯದಲ್ಲಿಯೂ ಅದೇ ರೀತಿ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಕಳೆದ ಎರಡು ವರ್ಷಗಳಿಂದ 80 ಕೋಟಿಗೂ ಹೆಚ್ಚು ಬಡವರು, ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಜನಾಂಗದವರಿಗೆ ಉಚಿತ ಪಡಿತರವನ್ನು ಒದಗಿಸಲಾಗುತ್ತಿದೆ. ಆಹಾರಧಾನ್ಯ ಯೋಜನೆ ಜಾರಿಯಿಂದ ಇಡೀ ವಿಶ್ವವೇ ಬೆರಗಾಗಿದೆ. ಇದರಿಂದ ಬಡವರು ಸಂತೋಷವಾಗಿರುವುದು ನನಗೆ ಖುಷಿ ತಂದಿದೆ. ಇದೆಲ್ಲ ರಾಜವಂಶದವರು ಗುರುತಿಸುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ಮಾಡಿದರು.
ರಾಹುಲ್ ಗಾಂಧಿ ಹೇಳಿಕೆಗೆ ಟಾಂಗ್ ಕೊಟ್ಟ ಮೋದಿ , ಅರಮನೆಗಳಲ್ಲಿ ವಾಸಿಸುವವರಿಗೆ ಮನೆಯಲ್ಲಿ ಶೌಚಾಲಯವಿಲ್ಲದೆ ಬಡ ತಾಯಿ ಪಡುವ ತೊಂದರೆ ತಿಳಿದಿಲ್ಲ. ಅವರು ಸೂರ್ಯೋದಯಕ್ಕೆ ಮುಂಚೆಯೇ ತಮ್ಮ ಎಲ್ಲ ಕೆಲಸಗಳನ್ನು ಮುಗಿಸಲು ಯಾವ ರೀತಿ ಯೋಚಿಸುತ್ತಾರೆ. ದಿನವಿಡೀ ಯಾವ ರೀತಿ ನೋವನ್ನು ಸಹಿಸಿಕೊಳ್ಳಬೇಕು ಎಂಬುದು ಅವರಿಗೆ ತಿಳಿದಿಲ್ಲ ಎಂದು ಸಿಡಿದರು. ಇದನ್ನೂ ಓದಿ: ಉಕ್ರೇನ್ನಲ್ಲಿ ಶೌಚಾಲಯ ಸ್ವಚ್ಛಗೊಳಿಸುವಂತೆ ಭಾರತೀಯ ವಿದ್ಯಾರ್ಥಿಗಳಿಗೆ ಆದೇಶಿಸಲಾಗಿದೆ: ರಾಹುಲ್ ಗಾಂಧಿ
ಪ್ರಧಾನಿ ಮೋದಿ ಕಳೆದ ಎರಡು ದಿನಗಳಿಂದ ವಾರಣಾಸಿಯಲ್ಲಿ ಪ್ರಚಾರದ ಸಲುವಾಗಿ ಬೀಡು ಬಿಟ್ಟಿದ್ದಾರೆ.
ಅಜಂಗಢ, ಮೌ, ಜೌನ್ಪುರ್, ಘಾಜಿಪುರ, ಚಂದೌಲಿ, ವಾರಣಾಸಿ, ಮಿರ್ಜಾಪುರ, ಭದೋಹಿ ಮತ್ತು ಸೋನ್ಭದ್ರ ಸೇರಿದಂತೆ ಒಂಬತ್ತು ಜಿಲ್ಲೆಗಳ ಒಟ್ಟು 54 ವಿಧಾನಸಭಾ ಸ್ಥಾನಗಳಿಗೆ ಮಾರ್ಚ್ 7 ರಂದು ಚುನಾವಣೆ ನಡೆಯಲಿದೆ.