ಮುಂಬೈ: ಅನೇಕ ಸಂದಂರ್ಭಗಳಲ್ಲಿ ಹಾವು ಕಾಣಿಸಿಕೊಂಡಾಗ ಉರಗ ತಜ್ಞರು ಬಂದು ಬೇರೆಯವರ ಪ್ರಾಣ ಕಾಪಾಡಿದ್ದಾರೆ. ಆದ್ರೆ ಮುಂಬೈನಲ್ಲಿ ಉರಗ ರಕ್ಷಕರೊಬ್ಬರು ತಾವೇ ರಕ್ಷಿಸಿದ ಹಾವಿನಿಂದ ಕಚ್ಚಿಸಿಕೊಂಡು ಸಾವನ್ನಪ್ಪಿದ್ದಾರೆ.
ಫೆಬ್ರವರಿ 1ರಂದು ಮುಂಬೈನ ಉರಗ ರಕ್ಷಕ ಸೋಮನಾಥ್ ನಾಗರಹಾವೊಂದನ್ನು ರಕ್ಷಿಸಿದ್ದರು. ಹವಿನೊಂದಿಗೆ ಫೋಟೋ ತೆಗಿಸಿಕೊಳ್ಳುವಾಗ ಅದರ ನೆತ್ತಿಗೆ ಮುತ್ತು ಕೊಡಲು ಮುಂದಾಗಿದ್ದರು. ಈ ವೇಳೆ ಹಾವು ಹಿಂದೆ ತಿರುಗಿ ಸೋಮನಾಥ್ಗೆ ಕಚ್ಚಿ ಸಾವನ್ನಪ್ಪಿದ್ದಾರೆ.
ನವೀ ಮುಂಬೈನ ಸಿಬಿಡಿ ಬಲೇಪುರ್ ನಿವಾಸಿಯಾದ ಸೋಮನಾಥ್, ಅಂದು ಕಾರ್ವೊಂದರಲ್ಲಿ ಕಾಣಿಸಿಕೊಂಡಿದ್ದ ಹಾವನ್ನು ರಕ್ಷಿಸಲು ಹೋಗಿದ್ದರು. ಕಾರಿನಿಂದ ಹಾವನ್ನು ರಕ್ಷಿಸಿ ಬೇರೆಡೆಗೆ ಅದನ್ನು ತೆಗೆದುಕಂಡು ಹೋಗಿದ್ದರು. ಅಲ್ಲಿ ಸೋಮನಾಥ್ ಹಾವಿನ ನೆತ್ತಿಗೆ ಮುತ್ತು ಕೊಡಲು ಪ್ರಯತ್ನಿಸಿದ್ದರು. ಆದ್ರೆ ಇದ್ದಕ್ಕಿದ್ದಂತೆ ಹಾವು ಹಿಂದೆ ತಿರುಗಿ ಸೋಮನಾಥ್ ಅವರ ಎದೆಗೆ ಕಚ್ಚಿತ್ತು. ನಂತರ ಅವರನ್ನು 5 ದಿನಗಳವರೆಗೆ ನವೀ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆಂದು ಮತ್ತೊಬ್ಬ ಉರಗ ರಕ್ಷಕರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಸೋಮನಾಥ್ ಈ ಹಿಂದೆ ಸುಮಾರು 100 ವಿಷಕಾರಿ ಹಾವುಗಳನ್ನ ರಕ್ಷಿಸಿದ್ದರು.
ಕಳೆದ 12 ವರ್ಷಗಳಲ್ಲಿ ಹಾವಿಗೆ ಮುತ್ತು ಕೊಡುವ ಸ್ಟಂಟ್ ಮಾಡಲು ಹೋಗಿ ಸತ್ತವರಲ್ಲಿ ಸೋಮನಾಥ್ 31ನೇ ಯವರು ಎಂದು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ನಾಗರಹಾವಿನಿಂದ ಕಚ್ಚಿಸಿಕೊಂಡು ಈವರೆಗೆ 22 ಉರಗ ರಕ್ಷಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.