ಚಿಕ್ಕಬಳ್ಳಾಪುರ: ಹೊಸ ವರ್ಷ (New Year) 2023ನ್ನು ಸ್ವಾಗತಿಸೋಕೆ ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ. ನ್ಯೂ ಇಯರ್ ಸೆಲೆಬ್ರೇಷನ್ ಹೆಸರಲ್ಲಿ ಸಂಭ್ರಮ, ಮೋಜು, ಮಸ್ತಿ ಅಂತ ಬಹುತೇಕರು ಪ್ಲಾನ್ ಮಾಡಿಕೊಂಡಿದ್ದಾರೆ. ಹಾಗಂತ ನೀವು ನಂದಿಬೆಟ್ಟದಲ್ಲಿ (Nandi Hills) ನ್ಯೂ ಇಯರ್ ಸ್ವಾಗತಿಸೋಣ, ಸಂಭ್ರಮಿಸೋಣ ಅಂತ ಪ್ಲಾನ್ ಮಾಡಿಕೊಂಡಿದ್ದರೆ ನಿಮ್ಮ ಪ್ಲಾನ್ ಚೇಂಜ್ ಮಾಡಿಕೊಳ್ಳಿ ಯಾಕೆಂದರೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.
ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ನಂದಿಗಿರಿಧಾಮ ಅಂದರೆ ತಂಪಾದ ಹವಾಗುಣ, ತುಂತುರು ಮಳೆ, ಗಿಡ, ಮರ, ಬಳ್ಳಿಗಳ ಸೊಬಗು, ನಕ್ಕು ನಲಿಯುವ ತರಹೇವಾರು ಹೂಗಳ ವಯ್ಯಾರ. ಮಿಗಿಲಾಗಿ ಸಮುದ್ರಮಟ್ಟದಿಂದ 1,600 ಮೀಟರ್ ಎತ್ತರದಲ್ಲಿ ನಿಂತು ಸೂರ್ಯೋದಯ ಹಾಗೂ ಸೂರ್ಯಸ್ತಮದ ವಿಹಂಗಮ ನೋಟ ನೋಡುವುದಕ್ಕೆ ತುಂಬಾ ಫೇಮಸ್. ನಂದಿಗಿರಿಧಾಮದಲ್ಲಿ ಕಾಣಸಿಗುವ ಬೆಳ್ಳಿ ಮೋಡ, ಇಬ್ಬನಿ, ಸುತ್ತಲೂ ಎತ್ತ ನೋಡಿದರೂ ಮುತ್ತಿಕ್ಕುವ ಮಂಜು, ಇಂಥ ಪ್ರಕೃತಿ ಸೊಬಗಿನಲ್ಲಿ ಕುಳಿತು ಹೊಸ ವರ್ಷ 2023ನ್ನು ಸ್ವಾಗತಿಸೋಣ ಅಂತ ಕೆಲವು ಪಾರ್ಟಿ ಪ್ರಿಯರು ಅಂದುಕೊಂಡಿದ್ರು. ಆದ್ರೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಪಾರ್ಟಿ ಪ್ರಿಯರ ಕನಸಿಗೆ ನಿರಾಸೆ ಮಾಡಿದ್ದು, ಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಜಿಲ್ಲಾಧಿಕಾರಿ ಎನ್.ಎಂ ನಾಗರಾಜು ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಪೊಲೀಸರ ಸೋಗಿನಲ್ಲಿ ಬಂದು 80 ಲಕ್ಷ ದರೋಡೆ
ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ 2023 ಜನವರಿ 1ರ ಬೆಳಗ್ಗೆ 6 ಗಂಟೆವರೆಗೂ ನಂದಿಗಿರಿಧಾಮಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿದ್ದು, ಅತಿಥಿ ಗೃಹಗಳಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಹೀಗಾಗಿ ಡಿ.31ರ ರಾತ್ರಿ ಬೆಟ್ಟದ ಮೇಲೆ ಯಾರೂ ಉಳಿದುಕೊಳ್ಳುವಂತಿಲ್ಲ. ಮೋಜು ಮಸ್ತಿ ಪಾರ್ಟಿ ಸೆಲೆಬ್ರೇಷನ್ ಹೆಸರಲ್ಲಿ ಅಪಘಾತ ಅನಾಹುತ ಅವಘಡಗಳಾಗಬಹುದು. ರಾತ್ರಿ ವೇಳೆ ಬೆಟ್ಟದ ಮೇಲೆ ಸಂಚಾರ ಒಳ್ಳೆಯದಲ್ಲ ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ. ನಂದಿಗಿರಿಧಾಮಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧ ಮಾಡಿದ ಕಾರಣ ಸಾರ್ವಜನಿಕರು ಗಿರಿಧಾಮಕ್ಕೆ ಹೊಂದಿಕೊಂಡಿರುವ ಸ್ಕಂದಗಿರಿ ಬೆಟ್ಟ, ಚನ್ನಗಿರಿ ಬೆಟ್ಟ, ಆವುಲಬೆಟ್ಟ, ಕೈವಾರ ಬೆಟ್ಟಕ್ಕೂ ಭೇಟಿ ನೀಡುವ ಸಾಧ್ಯತೆ ಹಿನ್ನೆಲೆ ಆ ಬೆಟ್ಟಗಳಿಗೂ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ: ಕೊರೊನಾಗೆ ಇಡೀ ಜಗತ್ತೇ ತತ್ತರಿಸಿದ್ರೆ, ಈ 2 ದೇಶಗಳಲ್ಲಿ ಮಾತ್ರ ಒಂದೇ ಒಂದು ಕೇಸ್ ಇಲ್ಲ
ನಂದಿಗಿರಿಧಾಮದ ಸುತ್ತಮುತ್ತ ಇರುವ ಹೋಟೆಲ್, ರೆಸಾರ್ಟ್, ಹೋಮ್ಸ್ಟೇ ಮಾಲೀಕರ ಜೊತೆ ಸಭೆ ನಡೆಸಿರುವ ಪೊಲೀಸರು, ಲಾಭದ ಆಸೆಗೆ ಬಿದ್ದು ಸರ್ಕಾರ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಚಿಕ್ಕಬಳ್ಳಾಪುರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಜನವರಿ 1 ರ ಬೆಳಗ್ಗೆ 6 ಗಂಟೆಯಿಂದ ಎಂದಿನಂತೆ ನಂದಿಬೆಟ್ಟಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶವಿದ್ದು ಅಂದು ಎಂದಿನಂತೆ ಬಂದು ಹೋಗಬಹುದಾಗಿದೆ.