ಮೈಸೂರು: ನಂಜನಗೂಡು ತಾಲೂಕಿನ ಹರತಲೆ ಗ್ರಾಮದಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸಿ ಜನರು ಮೀನು ಖರೀದಿಸಿದ್ದಾರೆ.
ಮಾಂಸ ಮತ್ತು ಮೀನು ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದ್ದರೂ, ಜನ ಮಾತ್ರ ಸಿಗುತ್ತೋ? ಇಲ್ವೋ ಎಂಬಂತೆ ಒಬ್ಬರ ಮೇಲೆ ಒಬ್ಬರು ಬಿದ್ದು ಮೀನು ಖರೀದಿಸಿದ್ದಾರೆ. ಹರತಲೆ ಗ್ರಾಮದ ಕೆರೆಯ ಬಳಿ ಕಾದು ಕುಳಿತಿದ್ದ ಜನರು, ಮೀನು ಬರುತ್ತಿದ್ದಂತೆ ಮುಗಿಬಿದ್ದಿದ್ದಾರೆ. ಮೀನು ಖರೀದಿಸುವ ಅವಸರದಲ್ಲಿ ಯಾರು ಸಹ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಮಾಸ್ಕ್ ಸಹ ಹಾಕದೇ ನಿರ್ಲಕ್ಷ್ಯ ತೋರಿದ್ದಾರೆ.
ನಂಜನಗೂಡಿನ ಜ್ಯೂಬಿಲಿಯೆಂಟ್ಸ್ ಕಾರ್ಖಾನೆಯಿಂದಲೇ ಇಲ್ಲಿಯವರೆಗೆ 71 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಜ್ಯೂಬಿಲಿಯೆಂಂಟ್ಸ್ ಕಾರ್ಖಾನೆಯ 2 ಸಾವಿರಕ್ಕಿಂತ ಹೆಚ್ಚು ಮಂದಿಯ ಪರೀಕ್ಷೆ ನಡೆಸಲಾಗಿದೆ. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದ ಪರೀಕ್ಷೆಯೂ ಮುಗಿದಿದೆ. ಮಂಗಳವಾರ ಒಂದೇ ದಿನ 160 ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಪರೀಕ್ಷೆಯ ಫಲಿತಾಂಶ ಬಂದ್ರೆ ಅಲ್ಲಿಗೆ ನಂಜನಗೂಡು ಕಾರ್ಖಾನೆಯಿಂದ ಹಬ್ಬಿದ ನಂಜಿನ ಮೂಲದ ಪರೀಕ್ಷೆ ಕೊನೆ ಆಗಲಿದೆ. ತಾಲೂಕಿನಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದ್ರೂ, ಹರತಲೆ ಗ್ರಾಮಸ್ಥರಿಗೆ ಪ್ರಾಣಕ್ಕಿಂತ ಮೀನು ಹೆಚ್ಚಾದಂತೆ ಕಾಣಿಸಿದೆ.