ಮೈಸೂರು: ಜಿಲ್ಲೆಯ ಮತ್ತಿಬ್ಬರಿಗೆ ಕೊರೊನಾ ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 86ಕ್ಕೆ ಏರಿಕೆ ಆಗಿದೆ. ಹೊಸದಾಗಿ ವರದಿ ಆದ ಎರಡು ಕೊರೊನಾ ಸೋಂಕಿತರು ನಂಜನಗೂಡಿನ ಜ್ಯೂಬಿಲಿಯೆಂಟ್ ಕಾರ್ಖಾನೆಯ ನೌಕರನ ಜೊತೆ ದ್ವಿತೀಯ ಸಂಪರ್ಕ ಹೊಂದಿದ್ದರು. ಕಾರ್ಖಾನೆಯಿಂದಲೇ ಇಲ್ಲಿಯವರೆಗೆ 71 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಜ್ಯೂಬಿಲಿಯೆಂಂಟ್ಸ್ ಕಾರ್ಖಾನೆಯ 2 ಸಾವಿರಕ್ಕಿಂತ ಹೆಚ್ಚು ಮಂದಿಯ ಪರೀಕ್ಷೆ ನಡೆಸಲಾಗಿದೆ. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದ ಪರೀಕ್ಷೆಯೂ ಮುಗಿದಿದೆ. ಮಂಗಳವಾರ ಒಂದೇ ದಿನ 160 ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಪರೀಕ್ಷೆಯ ಫಲಿತಾಂಶ ಬಂದ್ರೆ ಅಲ್ಲಿಗೆ ನಂಜನಗೂಡು ಕಾರ್ಖಾನೆಯಿಂದ ಹಬ್ಬಿದ ನಂಜಿನ ಮೂಲದ ಪರೀಕ್ಷೆ ಕೊನೆ ಆಗಲಿದೆ.
ಮೈಸೂರಿನ ಪಾಲಿಗೆ ತಬ್ಲಿಘಿ ಜಮಾತ್ ಕೂಡಾ ಕಂಟಕವಾಗಿ ಕಾಡಿತ್ತು. ಜಮಾತ್ ನಂಟಿನ ಕೊಂಡಿಯಲ್ಲಿ 88 ಜನರಿದ್ರು. ಇವರಲ್ಲಿ 10 ಪಾಸಿಟಿವ್ ಪ್ರಕರಣ ಬಂದಿದ್ರೆ, ಉಳಿದ 78 ಪ್ರಕರಣಗಳು ನೆಗೆಟಿವ್ ಬಂದಿದೆ. ತಬ್ಲಿಘಿಗಳ ಸಂಪರ್ಕದಲ್ಲಿದ್ದ ಎಲ್ಲರೂ ಕ್ವಾರಂಟೈನ್ನಲ್ಲಿದ್ದಾರೆ. ಮೈಸೂರಲ್ಲಿ ಮತ್ತೆ ತಬ್ಲಿಘಿಗಳ ಕೇಸಲ್ಲಿ ಪಾಸಿಟಿವ್ ಬರೋ ಸಾಧ್ಯತೆ ಕಡಿಮೆ.
ಜ್ಯೂಬಿಲಿಯೆಂಟ್ ಕಾರ್ಖಾನೆಯ ಕೊರೊನಾ ಸೋಂಕಿನ ರಹಸ್ಯ ಬೇಧಿಸಲು ಮೈಸೂರು ಎಸ್ಪಿ ರಿಷ್ಯಂತ್ ತನಿಖಾ ತಂಡ ರಚಿಸಿದ್ದಾರೆ. ಕಾರ್ಖಾನೆಯ ನೌಕರನಿಗೆ ಮೊದಲಿಗೆ ಕೊರೊನಾ ಹಬ್ಬಿದ್ದು ಹೇಗೆ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತದೆ. ಸದ್ಯ ಗುಣಮುಖ ಆಗಿರುವ ಕೊರೊನಾ ರೋಗಿ ಸಂಖ್ಯೆ 52ರ ಪತ್ನಿ ಮತ್ತು ಮಾವನನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ. ಔಷಧೋತ್ಪನ್ನ ಕಂಪನಿ ಆಗಿರುವ ಜ್ಯೂಬಿಲೆಂಟ್ ಕಂಪನಿಗೂ ತೆರಳಿ ಮಾಹಿತಿ ಕಲೆ ಹಾಕಲಿದ್ದಾರೆ.
ಸದ್ಯಕ್ಕೆ ಮೈಸೂರು ತಬ್ಲಿಘಿ ಮತ್ತು ನಂಜನಗೂಡು ನಂಜಿನಿಂದ ಹೊರಬರುವ ಲಕ್ಷಣ ಕಾಣಿಸುತ್ತಿದೆ. ಆದರೆ ಕೊರೊನಾ ಹಾಟ್ಸ್ಪಾಟ್ನಿಂದ ಹೊರಬರಲು ಇನ್ನಷ್ಟು ದಿನ ಕಾಯಬೇಕಾಗುತ್ತದೆ. ಅಲ್ಲಿಯವರೆಗೂ ಲಾಕ್ಡೌನ್ ಪಾಲಿಸುವುದು ಕಡ್ಡಾಯ.