ತುಮಕೂರು: ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಜನರು, ಮುಖಂಡರು ಭಾಗಿಯಾಗಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.
ನಗರದ ಹಜರತ್ ರೆಹಾನ್ ದರ್ಗಾ ಬಳಿ ಸಮಾವೇಶಗೊಂಡ ಪ್ರತಿಭಟನಾಕಾರರು ಬೃಹತ್ ರಾಷ್ಟ್ರಧ್ವಜ ಹಿಡಿದು ನಾವೂ ಕೂಡ ಭಾರತೀಯರು ಎಂದು ಕೂಗಿದ್ದಾರೆ. ಅಲ್ಲದೆ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಹಲವು ಮುಖಂಡರು ಮಾತನಾಡಿ, ಎನ್ಆರ್ ಸಿ ಮತ್ತು ಸಿಎಎ ಮುಸಲ್ಮಾನರಿಗೆ ಮರಣ ಶಾಸನದಂತಿದೆ. ಇದರಿಂದಾಗಿ ಎಲ್ಲಾ ಮುಸಲ್ಮಾನಿಯರಲ್ಲಿ ಆತಂಕ ಹುಟ್ಟಿದೆ. ಸರ್ಕಾರ ಈ ಎರಡು ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೋಲಿಸ್ ಬಂದೋಬಸ್ತ್ ಒದಗಿಸಲಾಗಿತ್ತು.