ಮಂಗಳೂರು: ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರಿಂದ ಆಶೀರ್ವಾದ ಪಡೆದಿದ್ದಾರೆ.
ಇಂದು ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಬ್ರಹ್ಮಶ್ರೀ ನಾರಾಯಣಗುರುವಿಗೆ ವಂದಿಸಿ ಬಳಿಕ ಅಲ್ಲೇ ಇದ್ದ ಜನಾರ್ದನ ಪೂಜಾರಿಯವರ ಆಶೀರ್ವಾದ ಪಡೆದಿದ್ದಾರೆ. ನಂತರ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಅಲೆಯಿದೆ. ಕಾಂಗ್ರೆಸ್ನಿಂದ ಮಿಥುನ್ ರೈ ಉತ್ತಮ ಅಭ್ಯರ್ಥಿ. ಮೋದಿ ಅಲೆಯಿಂದಾಗಿ ಇಲ್ಲಿ ಕಾಂಗ್ರೆಸ್ ಪರಿಸ್ಥಿತಿ ಚೆನ್ನಾಗಿಲ್ಲ. ಇನ್ನು ಎರಡು ಚುನಾವಣೆಯಲ್ಲೂ ಮೋದಿಯವರೇ ಅಧಿಕಾರಕ್ಕೆ ಬರುತ್ತಾರೆ. ಇಡೀ ದೇಶದಲ್ಲಿ ಮೋದಿ ಹವಾ ಹೆಚ್ಚಾಗಿದೆ. ಮೋದಿಯೇ ಬರ್ತಾರೆ ಎಂದು ಜನಾರ್ದನ ಪೂಜಾರಿ ಭವಿಷ್ಯ ನುಡಿದರು.
ನಾನೂ ಚೌಕೀದಾರ್ ಎಂಬ ಘೋಷಣೆಯೊಂದಿಗೆ ನೂರಾರು ಕಾರ್ಯಕರ್ತರು ಮೋದಿ ರೀತಿಯಲ್ಲಿ ಕೇಸರಿ ಪೇಟ ತೊಟ್ಟು ಮನೆ, ಮನೆಗೆ ತೆರಳಿ, ಪ್ರಚಾರ ನಡೆಸಿದ್ದಾರೆ. ಕೇಸರಿ ಪಾಳಯದ ಹೊಸ ರೀತಿಯ ಪ್ರಚಾರ ಕಾರ್ಯಕರ್ತರಲ್ಲಿ ಹೊಸ ಹುರುಪು ನೀಡಿದೆ. ಒಟ್ಟಿನಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಅಭ್ಯರ್ಥಿ ಘೋಷಣೆ ವಿಳಂಬವಾದ್ರೂ, ಚುನಾವಣೆಯ ಕಾವು ಒಂದೇ ಬಾರಿಗೆ ಏರತೊಡಗಿದೆ. ನಾಳೆ, ಬಿಜೆಪಿ – ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದು ಮಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗುವ ಸಾಧ್ಯತೆ ಇದೆ.