ಮಂಗಳೂರು: ಚುನಾವಣೆಯ ಹೊಸ್ತಿಲಿನಲ್ಲಿ ನಿರ್ಮಲಾ ಸೀತಾರಾಮನ್ (Niramala Sitharaman) ಅವರು ಸದೃಢ ದೇಶ ನಿರ್ಮಾಣದ ಅಭಿವೃದ್ಧಿಯ ಬಜೆಟ್ ಮಂಡಿಸಿದ್ದಾರೆ. ಬಡವರ, ರೈತರ ಹಾಗೂ ಎಲ್ಲ ವರ್ಗದ ಜನತೆಯ ಹಿತ ಕಾಯುವ ಬಜೆಟ್ (Union Budget 2024) ಇದಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ.
ಮಹಿಳಾ ಸಬಲೀಕರಣಕ್ಕೆ ವಿಶೇಷ ಆದ್ಯತೆ ಕಲ್ಪಿಸಲಾಗಿರುವ ಈ ಬಜೆಟ್ 9 ರಿಂದ 14 ವರ್ಷ ವಯಸ್ಸಿನ ಹೆಣ್ಣುಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ನಿರೋಧಕ ಲಸಿಕೆಗೆ ಉತ್ತೇಜನ ನೀಡುವ ಮೂಲಕ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ. ಲಕ್ಷ ದ್ವೀಪದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪರೋಕ್ಷವಾಗಿ ಮಂಗಳೂರು ಸಹಿತ ಕರಾವಳಿಯ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ದಿಗೂ ಸಹಕಾರಿಯಾಗಲಿದೆ ಎಂದರು.
ಕರಾವಳಿಯ ಮೀನುಗಾರರಿಗೆ ವರದಾನ: ಪ್ರವಾಸೋದ್ಯಮಕ್ಕೆ ಒತ್ತು ನೀಡಿರುವುದರಿಂದ ಅನೇಕ ಉದ್ಯೋಗ ಹಾಗೂ ವ್ಯವಹಾರಗಳು ಸೃಷ್ಟಿಯಾಗಲಿವೆ. ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಮೂಲಕ ಮೀನುಗಾರರ ಬಹುಕಾಲದ ಬೇಡಿಕೆ ಈಡೇರಿಸಿದ್ದ ಕೇಂದ್ರ ಸರ್ಕಾರ ಈಗ ಮತ್ಸ್ಯ ಸಂಪದ ಯೋಜನೆ ಮುಂದುವರಿಸಿದ್ದು, ಕರಾವಳಿಯ ಮೀನುಗಾರರಿಗೆ ವರದಾನವಾಗಲಿದೆ. ದೇಶಾದ್ಯಂತ ಒಂದು ಕೋಟಿ ಮನೆಗಳಿಗೆ ಸೌರ ವಿದ್ಯುತ್, ಮುಂದಿನ 5 ವರ್ಷಗಳಲ್ಲಿ 3 ಕೋಟಿ ಹೊಸ ಮನೆ ನಿರ್ಮಾಣ, ಹೆಚ್ಚಿನ ಮೆಡಿಕಲ್ ಕಾಲೇಜು ನಿರ್ಮಾಣ ಸ್ವಾಗತಾರ್ಹವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.