ತುಮಕೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಸಂಸದ ಡಿ.ಕೆ.ಸುರೇಶ್ ಸರ್ಕಾರಕ್ಕೆ ನಾಚಿಕೆ, ಮಾನ ಮರ್ಯಾದೆ ಇಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿಯ ಯಲಿಯೂರು ಗ್ರಾಮದಲ್ಲಿ ಯಲಿಯೂರು ಗ್ರಾ.ಪಂ ಕಾರ್ಯಾಲಯದ ನೂತನ ಕಟ್ಟಡ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು, ಹಾಸನದ ಗೊರೂರು ಡ್ಯಾಂನಿಂದ ಕುಣಿಗಲ್ ತಾಲೂಕಿಗೆ ನೀರು ಹರಿಸಲು ಮೂಲ ಯೋಜನೆ ಪ್ರಕಾರ ನಾಲೆ ತೋಡಲಾಗಿದೆ. ನಿಯಮ ಪ್ರಕಾರ ತಾಲೂಕಿಗೆ ಮೂರೂವರೆ ಟಿಎಂಸಿ ನೀರು ಹರಿಸಬೇಕಿದೆ. ಅಂದು ವೈಕೆ ರಾಮಯ್ಯನವರಂತಹ ಜನಪರ ರಾಜಕಾರಣಿಗಳ ಹೋರಾಟದ ಪರಿಣಾಮ ತಾಲೂಕಿಗೆ ನೀರುಹರಿಸಲು ಮಾಡಿದ ಕಾಲುವೆಯಿಂದ ಇಂದು ಕೊರಟಗೆರೆ ಶಿರಾ ಇತರೆ ಕಡೆಯವರು ನೀರನ್ನು ಪಡೆಯುತ್ತಾ ವಂಚನೆ ಮಾಡಿದರೂ ತಾಲೂಕಿನ ಜನ ಸುಮ್ಮನಿರುವುದು ನಿಜಕ್ಕೂ ಅಶ್ಚರ್ಯಕರ. ನಿಮ್ಮ ಮನೆಯ ನೀರು ಕದಿಯುತ್ತಿದ್ದರೂ ಸುಮ್ಮನಿದ್ದೀರಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದಿನ ಸರ್ಕಾರದಲ್ಲಿ ತಾಲೂಕಿಗೆ 25 ವರ್ಷದಿಂದ ಮಾಡಿರುವ ಅನ್ಯಾಯ ಸರಿಪಡಿಸಲು ಲಿಂಕ್ ಕೆನಾಲ್ಗೆ 615 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದರೂ ಈಗಿನ ಬಿಜೆಪಿ ಸರ್ಕಾರ ಟೆಂಡರ್ ರದ್ದು ಮಾಡಿದೆ. ಸರ್ಕಾರಕ್ಕೆ ತಾಲೂಕಿನ ಜನರ ಬಗ್ಗೆ ಗೌರವ ಇದ್ದರೆ ಕೂಡಲೇ ಕಾಮಗಾರಿಗೆ ಅನುಮೋದನೆ ನೀಡಲಿ. ಈ ಬಜೆಟ್ನಲ್ಲೇ ಘೋಷಣೆ ಮಾಡಲಿ ಎಂದ ಅವರು ಸರ್ಕಾರ ಸ್ಪಂದಿಸದೆ ಇದ್ದಲ್ಲಿ ತಾಲೂಕಿನ ಜನರು ಹೋರಾಟಕ್ಕೆ ಸಿದ್ಧರಾಗಬೇಕಿದೆ ಎಂದರು.
ಶಾಸಕ ಡಾ.ರಂಗನಾಥ್, ಜಿಪಂ ಸದಸ್ಯೆ ಭಾಗ್ಯಮ್ಮ, ಗ್ರಾ.ಪಂ. ಅಧ್ಯಕ್ಷೆ ಮಮತಾ, ತಾ.ಪಂ ಸದಸ್ಯ ವಿಶ್ವನಾಥ್ ಮುಖಂಡರಾದ ಗಂಗಶಾನಯ್ಯ, ಕೆಂಪೀರೆಗೌಡ, ಶಾಂತರಾಜು, ತಹಶೀಲ್ದಾರ್ ವಿಶ್ವನಾಥ್, ಇಒ ಶಿವರಾಜಯ್ಯ, ಪಿಡಿಒ ಶಂಕರ್ ಇತರರು ಇದ್ದರು.