ಬೆಂಗಳೂರು: ಅಜಾಗರೂಕತೆ ಪರಿಣಾಮ ಬೆಳಕಿನ ಹಬ್ಬ ದೀಪಾವಳಿಯಂದು ಹಲವರ ಬಾಳಲ್ಲಿ ಕತ್ತಲು ಆವರಿಸುವ ಸ್ಥಿತಿ ಏರ್ಪಟ್ಟಿದೆ. ಬೆಂಗಳೂರಿನ (Bengaluru Deepavali) 25 ಕ್ಕೂ ಹೆಚ್ಚು ಮಂದಿ ಮಿಂಟೋ, ನಾರಾಯಣ ನೇತ್ರಾಲಯ ಸೇರಿದ್ದಾರೆ.
ಇದುವರೆಗೆ 26 ಮಂದಿ ಪಟಾಕಿಯಿಂದ ಕಣ್ಣಿಗೆ ಹಾನಿಯಾಗಿ ನಾರಾಯಣ ನೇತ್ರಾಲಯದಲ್ಲಿ ದಾಖಲಾಗಿದ್ದಾರೆ. ಇದರಲ್ಲಿ 13 ಮಂದಿ ಮಕ್ಕಳಿದ್ದಾರೆ. 5 ರೋಗಿಗಳ ಕಣ್ಣಿಗೆ ಗಂಭೀರ ಗಾಯಗಳಾಗಿವೆ. ಇದನ್ನೂ ಓದಿ: ಪಟಾಕಿ ಮಾರಾಟ ಮಳಿಗೆಗಳಲ್ಲಿ ಮಕ್ಕಳನ್ನ ನೇಮಿಸಿದ್ರೆ 2 ವರ್ಷ ಜೈಲು ಗ್ಯಾರಂಟಿ: ರಿಯಾಜ್ ಪಟೇಲ್
ಬೇರೆಯವರು ಪಟಾಕಿ ಹೊಡೆಯುವುದನ್ನು ನೋಡಲು ಹೋಗಿ ಗಾಯಗೊಂಡವರ ಸಂಖ್ಯೆಯೇ ಹೆಚ್ಚಿದೆ. ಹಸಿರು ಪಟಾಕಿಗೆ ಮಾತ್ರ ಅನುಮತಿ ಇದ್ದರೂ ಬೆಂಗಳೂರಿನಲ್ಲಿ ಢಂ ಢಂ ಸದ್ದು ಹೆಚ್ಚು ಕೇಳಿಬಂತು. ಪರಿಣಾಮ ನಗರದಲ್ಲಿ ವಾಯು ಮಾಲಿನ್ಯ ಹೆಚ್ಚಿದೆ.
ಅತಿ ಹೆಚ್ಚು ಅಂದರೆ ಜಯನಗರದಲ್ಲಿ 189 ಎಕ್ಯೂಐ ದಾಖಲಾಗಿದೆ. ಅತ್ತ ದೆಹಲಿವಾಸಿಗಳ ನಿರ್ಲಕ್ಷ್ಯದ ಕಾರಣ ಮತ್ತೆ ವಾಯುಮಾಲಿನ್ಯ ಅಪಾಯಕಾರಿ ಮಟ್ಟ ತಲುಪಿದೆ. ಜನ ನಿಷೇಧ ಉಲ್ಲಂಘಿಸಿ ಮತಾಪು ಸಿಡಿಸಿದ್ದಾರೆ. ಪರಿಣಾಮ ದೆಹಲಿ-ಎನ್ಸಿಆರ್ನಲ್ಲಿ ಹೊಗೆ ಆವರಿಸಿದೆ. ಇದನ್ನೂ ಓದಿ: ರಾಜಕೀಯ ಬೇಡ ಅಂದ್ರೆ ಮನೆಯಲ್ಲಿರ್ತೀನಿ – ಸಿ.ಟಿ ರವಿ
ಲಜಪತ್ನಗರದಲ್ಲಂತೂ ಎಕ್ಯೂಐ ಪ್ರಮಾಣ 959ಕ್ಕೆ ಕುಸಿದಿತ್ತು. ಪಟಾಕಿ ಹೊಡೆಯಲು ಬಿಜೆಪಿ ಪ್ರಚೋದಿಸಿದೆ ಎಂದು ಆಪ್ ಆರೋಪಿಸಿದೆ. ಆದರೆ ಬಿಜೆಪಿ ಮಾತ್ರ, ‘ಆಪ್ಗೆ ಜನ ದೀಪಾವಳಿ ಆಚರಿಸೋದು ಇಷ್ಟವಿಲ್ಲ.. ಅದಕ್ಕೆ ಹೀಗೆಲ್ಲಾ ಮಾಡುತ್ತೆ… ಮೊನ್ನೆಗೆ ಹೋಲಿಸಿದ್ರೆ ಮಾಲಿನ್ಯ ಪ್ರಮಾಣ ಹೆಚ್ಚಿಲ್ಲ’ ಎಂದು ಹೇಳಿಕೊಂಡಿದೆ.
ವಿಶ್ವದ ಟಾಪ್ 10 ವಾಯುಮಾಲಿನ್ಯ ನಗರಗಳ ಪಟ್ಟಿಯಲ್ಲಿ ದೆಹಲಿಗೆ ಅಗ್ರಸ್ಥಾನ ಸಿಕ್ಕಿದೆ. ಇದೇ ಪಟ್ಟಿಯನ್ನು ಭಾರತದ ಮತ್ತೆರಡು ನಗರಗಳು ಸೇರಿವೆ. ನಾಲ್ಕನೇ ಸ್ಥಾನದಲ್ಲಿ ಕೋಲ್ಕತ್ತಾ ಹಾಗೂ 8ನೇ ಸ್ಥಾನದಲ್ಲಿ ಮುಂಬೈ ಇದೆ.