– ಪರಿಷತ್ನಲ್ಲಿ ಶಾಸಕಿ ಭಾರತಿ ಶೆಟ್ಟಿ ಪ್ರಸ್ತಾಪ
ಬೆಂಗಳೂರು: ಕರ್ನಾಟಕದಲ್ಲಿ ಹಿಜಬ್ ವಿವಾದ, ದಿ ಕಾಶ್ಮೀರ್ ಫೈಲ್ಸ್ ಸಿನಿಮಾ, ಮುಸ್ಲಿಂ ವರ್ತಕರಿಗೆ ನಿರ್ಬಂಧ ಬಳಿಕ ಇದೀಗ ಬಿಜೆಪಿ ಶಾಸಕರಿಂದ ಜನಸಂಖ್ಯಾ ನಿಯಂತ್ರಣದ ಬಗ್ಗೆ ಒತ್ತಡ ಕೇಳಿಬಂದಿದೆ.
ಈಗಾಗಲೇ ಉತ್ತರ ಪ್ರದೇಶದಲ್ಲಿ ಎರಡು ಮಕ್ಕಳಿಗಿಂತ ಹೆಚ್ಚಿದ್ರೆ ಸರ್ಕಾರಿ ಸೌಲಭ್ಯ ಕಡಿತ ಎಂಬ ನಿರ್ಣಯ ತೆಗೆದುಕೊಳ್ಳಲಾಗಿದೆ. ಉತ್ತರಾಖಂಡದಲ್ಲಿ ಏಕರೂಪ ನಾಗರೀಕ ಸಂಹಿತೆಗೆ ಕ್ಯಾಬಿನೆಟ್ನಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಇದನ್ನೆಲ್ಲ ಗಮನಿಸಿದ ಬಳಿಕ ಇದೀಗ ಕರ್ನಾಟಕದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೆ ತರಲು ಒತ್ತಡ ಕೇಳಿ ಬರುತ್ತಿದೆ. ಈ ಮೂಲಕ ಮುಂದಿನ ಚುನಾವಣೆಗೆ ರಾಜ್ಯದಲ್ಲೂ ಜನಸಂಖ್ಯಾ ನಿಯಂತ್ರಣ ಅಸ್ತ್ರ ಪ್ರಯೋಗಿಸುತ್ತಾ ಸರ್ಕಾರ ಕಣ್ಣಿಟ್ಟಿದೆ. ಇದನ್ನು ಗಮನಿಸಿದಾಗ ಕರ್ನಾಟಕದಲ್ಲಿ ಬಿಜೆಪಿ ಮುಂದಿನ ಅಸ್ತ್ರ ಜನಸಂಖ್ಯಾ ನಿಯಂತ್ರಣನಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಮಾರಾಮಾರಿ- ಐವರು ಬಿಜೆಪಿ ಶಾಸಕರು ಅಮಾನತು
ವಿಧಾನ ಪರಿಷತ್ ಶೂನ್ಯವೇಳೆಯಲ್ಲಿ ಬಿಜೆಪಿ ಎಮ್ಎಲ್ಸಿ ಭಾರತಿ ಶೆಟ್ಟಿ ಜನಸಂಖ್ಯಾ ನಿಯಂತ್ರಣದ ಪ್ರಸ್ತಾಪವನ್ನಿಟ್ಟಿದ್ದಾರೆ. ಸರ್ಕಾರದ ಪ್ರಯತ್ನಗಳ ಹೊರತಾಗಿಯೂ ಜನಸಂಖ್ಯೆ ಏರಿಕೆ ನಿಯಂತ್ರಣವಾಗುತ್ತಿಲ್ಲ. ಹೀಗಾಗಿ ಜನಸಂಖ್ಯಾ ನಿಯಂತ್ರಣಕ್ಕೆ ಹೊಸ ನಿಯಮ ಜಾರಿಗೆ ತರಬೇಕು. ಉತ್ತರ ಪ್ರದೇಶದ ಸರ್ಕಾರ ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳು ಇದ್ದವರಿಗೆ ಸರ್ಕಾರಿ ಸೌಲಭ್ಯ ಇಲ್ಲ ಅಂತ ಹೇಳಿದೆ. ಅದನ್ನು ಪರಿಶೀಲಿಸಿ ನಮ್ಮ ರಾಜ್ಯದಲ್ಲಿಯೂ ಅಂಥ ಕ್ರಮ ಜಾರಿ ಮಾಡಿ. ಎರಡು ಮಕ್ಕಳನ್ನು ಹೊಂದಿದ ಕುಟುಂಬಕ್ಕೆ ಮಾತ್ರ ಸರ್ಕಾರಿ ಸೌಲಭ್ಯ ಕೊಡಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಯುಗಾದಿ ವೇಳೆ ಹಲಾಲ್ ಮಾಂಸ ಬಹಿಷ್ಕರಿಸಿ – ಹಿಂದೂ ಜನಜಾಗೃತಿ ಸಮಿತಿ ಕರೆ
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ತೆರಿಗೆ ಹಣ ಪೋಲಾಗುತ್ತಿದೆ. ಜನರ ತೆರಿಗೆ ಸರಿಯಾಗಿ ವಿನಿಯೋಗ ಆಗಬೇಕು. ತೆರಿಗೆ ಹಣ ಕೊಡುವವರು ಯಾರೋ, ಫಲಾನುಭವಿಗಳು ಇನ್ಯಾರೋ ಆಗಬಾರದು. ಮಧ್ಯಮ ವರ್ಗದವರಿಂದಲೂ ತೆರಿಗೆ ಸಂಗ್ರಹವಾಗುತ್ತಿದೆ. ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ವರಿಗೂ ಸಮಪಾಲು ಅನ್ನೋದು ಅನ್ವಯ ಆಗಲ್ಲ. ಹೆಚ್ಚು ಮಕ್ಕಳಿದ್ದವರ ಮನೆಗೆ ಹೆಚ್ಚು ಅಕ್ಕಿ ಕೊಡುವಂಥ ಪರಿಸ್ಥಿತಿ ಇದೆ. ಒಂದು ಮನೆಗೆ ಒಂದು ಕ್ವಿಂಟಾಲ್ ಅಕ್ಕಿ ಸರ್ಕಾರ ಕೊಡುತ್ತಿದೆ. ಸಬ್ಸಿಡಿಯಲ್ಲಿ ಹೆಚ್ಚು ಮಕ್ಕಳಿರುವ ಮನೆಗೆ ಹೆಚ್ಚು ಅಕ್ಕಿ ಸರ್ಕಾರ ಕೊಡುತ್ತಿದೆ. ಜನಸಂಖ್ಯೆ ಹೆಚ್ಚಳ ಆರ್ಥಿಕ ಕುಸಿತಕ್ಕೂ ಕಾರಣವಾಗಿದೆ ಎಂದು ಹೇಳಿದರು.
ನಾನು ಚುನಾವಣೆ ಹಿನ್ನೆಲೆಯಲ್ಲಿ ಈ ಒತ್ತಾಯ ಮಾಡಿಲ್ಲ. ಇಂದಿರಾಗಾಂಧಿ ಕಾಲದಿಂದಲೂ ಜನಸಂಖ್ಯೆ ನಿಯಂತ್ರಣ ಕ್ರಮಗಳಿವೆ. ನಾವಿಬ್ಬರೂ ನಮಗಿಬ್ಬರು ಅನ್ನೋದು ಬಂತು. ಬಳಿಕ ನಾವಿಬ್ಬರು ನಮಗೊಬ್ಬರು ಅಂತನೂ ಬಂತು. ಕೆಲವರು ನಾವಿಬ್ಬರು ನಮ್ಮೊಂದಿಗೆ 28 ಜನ ಅಂತ ಬದುಕುತ್ತಿದ್ದಾರೆ ಇದು ನ್ಯಾಯವಲ್ಲ. ಮುಸ್ಲಿಂ ಸಮುದಾಯದವರನ್ನು ದೃಷ್ಟಿಯಲ್ಲಿಟ್ಕೊಂಡು ನಾನು ಈ ಒತ್ತಾಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮುಸ್ಲಿಂ ವ್ಯಾಪಾರಸ್ಥರಿಗೆ ಆರ್ಥಿಕ ನಿರ್ಬಂಧ ಹೇರಲು ಅವಕಾಶ ಕೊಡುವುದಿಲ್ಲ: ಅನಿಲ ಬೆನಕೆ
ನಮ್ಮ ಸರ್ಕಾರ ಅಲ್ಪಸಂಖ್ಯಾತರಿಗೆ ಅನೇಕ ಉತ್ತಮ ಕೆಲಸ ಮಾಡಿದೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಕೊಡಲು ಬಂದವರು. ನಾವು ರಾಜ್ಯದಲ್ಲಿ ಯಾವತ್ತು ಕೂಡ ಒಂದೇ ಸಮುದಾಯವನ್ನು ಮೆಚ್ಚಿಸಲು ಹೊರಟಿಲ್ಲ. ಕಾಂಗ್ರೆಸ್ ಈ ಹಿಂದೆ ಶಾದಿ ಭಾಗ್ಯ ನೀಡಿ ಮುಸ್ಲಿಂ ಸಮುದಾಯವನ್ನು ಮೆಚ್ಚಿಸಲು ಪ್ರಯತ್ನ ಪಟ್ಟಿತ್ತು. ನಾವು ಆ ರೀತಿ ಮಾಡಿಲ್ಲ. ಅಂಗೈ ಹುಣ್ಣಿಗೆ ಕನ್ನಡಿ ಬೇಡ ಎಂದು ಮಾರ್ಮಿಕವಾಗಿ ನುಡಿದರು.