ಬೆಂಗಳೂರು: ನನಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಲಿಲ್ಲ ಎಂಬ ಕೊರಗು ಯಾವಾಗಲೂ ಕಾಡುತ್ತಿರುತ್ತದೆ. ಇದರಿಂದಾಗಿ ನನ್ನ ಕ್ಷೇತ್ರದ ವಿದ್ಯಾರ್ಥಿಗಳ ವಿಚಾರದಲ್ಲಿ ಹಾಗಾಗಬಾರದು ಎಂದು ದ್ವಿಚಕ್ರ ವಾಹನವನ್ನು ವಿತರಿಸುತ್ತಿದ್ದೇನೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ಚಾಮರಾಜಪೇಟೆ ಕ್ಷೇತ್ರದ ಎಸ್ಎಸ್ಎಲ್ಸಿಯಲ್ಲಿ 19 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದ್ವಿಚಕ್ರ ವಾಹನಗಳ ವಿತರಣೆ ಹಾಗೂ ಹಲವು ವಿದ್ಯಾರ್ಥಿಗಳ ಶಾಲಾ ಶುಲ್ಕ ಭರಿಸಲು ತಲಾ 50,000 ರೂ. ನೆರವು ಆರ್ಥಿಕ ನೆರವು ನೀಡಿದ ಅವರು, ನಾನು ಇಂದು ಶಾಸಕನಾಗಿದ್ದೇನೆ. ನನ್ನ ಬಳಿ ಅಧಿಕಾರ, ಐಶ್ವರ್ಯ, ಜನರ ಪ್ರೀತಿ ಅಭಿಮಾನ ಎಲ್ಲವೂ ಇದೆ. ಆದರೆ ನನ್ನ ಬಳಿ ವಿದ್ಯೆ ಇಲ್ಲ ಎಂಬ ಕೊರಗಿದೆ. ಇದನ್ನು ನೆನೆಸಿಕೊಂಡು ಅನೇಕ ಬಾರಿ ಕಣ್ಣೀರಿಟ್ಟಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.
ವಿದ್ಯೆ ಇಲ್ಲ ಎಂದರೆ ಏನೂ ಮಾಡಲು ಸಾಧ್ಯವಿಲ್ಲ. ಇದರಿಂದಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಲಿಲ್ಲ ಎಂಬ ಕೊರಗು ಸದಾ ನನ್ನನ್ನು ಕಾಡುತ್ತಿರುತ್ತದೆ. ಹಾಗಾಗಿ, ನನ್ನ ಕ್ಷೇತ್ರದ ವಿದ್ಯಾರ್ಥಿಗಳ ವಿಚಾರದಲ್ಲಿ ಯಾರೂ ವಿದ್ಯೆ ಇಲ್ಲದೇ ಕಷ್ಟ ಅನುಭವಿಸಬಾರದು. ಅದಕ್ಕಾಗಿ ಅವರ ಶಿಕ್ಷಣಕ್ಕೆ ಅಗತ್ಯವಾದ ನೆರವನ್ನು ನಾನು ನೀಡುತ್ತಲೇ ಬಂದಿದ್ದೇನೆ. ಮುಂದೆಯೂ ನೀಡುತ್ತೇನೆ ಎಂದು ತಿಳಿಸಿದರು.
ಚಾಮರಾಜಪೇಟೆ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ವರ್ಷದಿಂದ ವರ್ಷಕ್ಕೆ ಉತ್ತಮ ಫಲಿತಾಂಶ ಪಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಪ್ರತಿವರ್ಷ ನನ್ನ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸಿ, ಕೈಲಾದ ನೆರವು ನೀಡಲು ನಿರ್ಧರಿಸಿದ್ದೇನೆ ಎಂದ ಅವರು, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ 19 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದ್ವಿಚಕ್ರ ವಾಹನಗಳು ಹಾಗೂ ಇಬ್ಬರು ವಿಶೇಷ ಚೇತನರಿಗೆ ವಿಶೇಷ ತ್ರಿಚಕ್ರ ವಾಹನಗಳನ್ನು ವಿತರಿಸಿದರು. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ ಇಂದು ಫಲಿತಾಂಶ ಪ್ರಕಟ – ದ್ರೌಪದಿ ಮುರ್ಮು ಗ್ರಾಮದಲ್ಲಿ ಸಂಭ್ರಮಾಚರಣೆಗೆ ಸಿದ್ಧತೆ
ಇದೇ ವೇಳೆ, ನಮಗೆ ವಾಹನ ಬೇಡ, ಬದಲಾಗಿ ಶಾಲೆಯ ಶುಲ್ಕ ಪಾವತಿಸಲು ನೆರವು ನೀಡಿ ಎಂದು ಮನವಿ ಮಾಡಿದ ಹಲವು ವಿದ್ಯಾರ್ಥಿಗಳಿಗೆ ತಲಾ 50,000 ರೂ.ಗಳಂತೆ ಆರ್ಥಿಕ ನೆರವು ನೀಡಿದರು. ಈ ಪೈಕಿ ಪರೀಕ್ಷೆಯಲ್ಲಿ ಶೇ.97ರಷ್ಟು ಫಲಿತಾಂಶ ಗಳಿಸಿರುವ ವೈಷ್ಣವಿ ಎಂಬ ವಿದ್ಯಾರ್ಥಿನಿಗೆ 80,000 ರೂ. ಧನ ಸಹಾಯದ ಜೊತೆಗೆ ದ್ವಿಚಕ್ರ ವಾಹನವನ್ನು ನೀಡಿದರು. ಇದನ್ನೂ ಓದಿ: INS ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ ಅವಘಡ