ಕೋಲಾರ: ಕೋಲಾರ ಜಿಲ್ಲೆಯ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಮ್ಮ ತಾಯಿ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಿ ಭೂಮಿ ಕಬಳಿಕೆ ಮಾಡಿದ್ದಾರೆ.
ಬಿಪಿಎಲ್ ತಾಯಿಗೆ ಮಂಜೂರಾದ ಜಮೀನು ಪಕ್ಕದಲ್ಲಿಯೇ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಎಸ್.ಎನ್.ಸಿಟಿ ಮಾಡಿಕೊಂಡಿದ್ದಾರೆ. ಆದರೆ ತಾಯಿ ಮುನಿಯಮ್ಮ ಮಾತ್ರ ಈಗಲೂ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಹುದುಕುಳ ಗ್ರಾಮದ ಸರ್ವೇ ನಂ.256 ರಲ್ಲಿ 3 ಎಕರೆ 10 ಗುಂಟೆ ಸರ್ಕಾರಿ ಜಮೀನನ್ನು ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಮ್ಮ ತಾಯಿ ಮುನಿಯಮ್ಮ ಹೆಸರಿಗೆ 2018-19ರಲ್ಲಿ ಮಂಜೂರು ಮಾಡಿದ್ದಾರೆ.
1998 ರಲ್ಲಿಯೇ ಅರ್ಜಿ ಸಲ್ಲಿಸಿದಂತೆ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಸರ್ಕಾರಿ ಭೂಮಿಯನ್ನು ತಮ್ಮ ತಾಯಿ ಹೆಸರಿಗೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಪ್ರಮುಖವಾಗಿ ಭೂಮಿ ಮಂಜೂರು ಮಾಡಿದಾಗ ದರಾಖಾಸ್ತು ಕಮಿಟಿ ಅಧ್ಯಕ್ಷರಾಗಿದ್ದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೋಟಿ ಬೆಲೆ ಬಾಳುವ ಜಮೀನನ್ನು ಕಮಿಟಿಯಲ್ಲಿ ತಮ್ಮ ತಾಯಿ ಹೆಸರಿಗೆ ಮಂಜೂರು ಮಾಡುವುದು ಸ್ವಜನ ಪಕ್ಷಪಾತ. ಇದನ್ನೂ ಓದಿ: ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂಗೆ ಬೆಳ್ಳಂಬೆಳಗ್ಗೆ ಶಾಕ್ – ಮನೆ ಸೇರಿ 7 ಕಡೆ ಸಿಬಿಐ ದಾಳಿ
ಇದಕ್ಕಾಗಿ ಅವರು ದರಖಾಸ್ತು ಕಮಿಟಿಯ ಸದಸ್ಯರನ್ನು ಕೂಡ ಬಳಕೆ ಮಾಡಿಕೊಂಡು ಸರ್ಕಾರಿ ಭೂಮಿಯನ್ನು ಶಾಸಕ ನಾರಾಯಣಸ್ವಾಮಿ ಕಬಳಿಕೆ ಮಾಡಿಕೊಂಡಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಿರುವ ಮುನಿಯಪ್ಪ ಅವರು ಶಾಸಕರಿಂದ ದೂರು ಉಳಿದಿದ್ದು ವಾರ್ಷಿಕ 15 ಸಾವಿರ ಆದಾಯ ಹೊಂದಿದ್ದಾರೆ. ಜೊತೆಗೆ ಅವರು 1998 ರಲ್ಲಿಯೇ ಸಾಗುವಳಿ ಚೀಟಿ ಜೊತೆ ಅರ್ಜಿ ಸಲ್ಲಿಸಿರುವ ದಾಖಲೆಗಳಿವೆ. ಅವರು ಭೂಮಿ ಮಂಜೂರಿಗಾಗಿ ಕೋರಿರುವ ದಾಖಲೆಗಳೆಲ್ಲವೂ ಕೂಡಾ ನ್ಯಾಯ ಬದ್ದವಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಿರುದ್ಧ ಸರ್ಕಾರಿ ಜಮೀನು ಕಬಳಿಕೆ ಆರೋಪ ಇದೇ ಮೊದಲೇನಲ್ಲ. ಈ ಹಿಂದೆ ಕೋಲಾರ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ.ರವಿ ಕೂಡ ಗಾಲ್ಫ್ ರೆಸಾರ್ಟ್ಗಾಗಿ ಸರ್ಕಾರಿ ಭೂಮಿಯನ್ನು ಕಬಳಿಕೆ ಮಾಡಿದ್ದಾರೆ ಎಂದು ದಾಖಲೆ ಸಮೇತ ಆರೋಪ ಮಾಡಿದ್ದರು. ಆದರೆ ಅದು ಹೈಕೋರ್ಟ್ನಲ್ಲಿಯೇ ಇತ್ಯರ್ಥವಾಗಿತ್ತು. ಕೆಲ ತಿಂಗಳ ಹಿಂದೆಯಷ್ಟೇ ಸಂಸದ ಮುನಿಸ್ವಾಮಿ ಕೂಡ ಸರ್ಕಾರಿ ಜಮೀನು ಕಬಳಿಕೆ ಮಾಡಿದ್ದಾರೆ, ಆದರೆ ಇದ್ಯಾವುದು ಕೂಡ ಸಾಬೀತಾಗದೆ ಸುಮ್ಮನಾಗಿದ್ದಾರೆ. ಇದನ್ನೂ ಓದಿ: ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ – ನಟ ದಿಲೀಪ್ ಸ್ನೇಹಿತ ಅರೆಸ್ಟ್
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ನಾರಾಯಣಸ್ವಾಮಿ, ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ನನ್ನ ಹಾಗೂ ನನ್ನ ತಾಯಿ ಜೊತೆಗೆ ಕೇವಲ ರಕ್ತ ಸಂಬಂಧ ಇದೆ, ಹೊರತು ನಮ್ಮ ನಡುವೆ ಯಾವುದೇ ವ್ಯವಹಾರಿಕ ಸಂಬಂಧ ಹೊಂದಿಲ್ಲ. ನಾವು 1995 ರಲ್ಲಿಯೇ ಅದರಿಂದ ಹೊರ ಬಂದಿದ್ದೇವೆ. ನಾನು ಶಾಸಕನಾಗುವ ಮೊದಲೇ ಅಂದರೆ 1998 ರಲ್ಲಿ ಭೂಮಿ ಮಂಜೂರಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಭೂಮಿ ಮಂಜೂರು ಮಾಡಲು ಬೇಕಿರುವ ಎಲ್ಲಾ ದಾಖಲೆಗಳು ಸರಿಯಾಗಿರುವ ಕಾರಣ ಭೂಮಿ ಮಂಜೂರು ಮಾಡಲಾಗಿದೆ. ಇದರಲ್ಲಿ ಯಾವುದೇ ಅಕ್ರಮ ಸ್ವಜನ ಪಕ್ಷಪಾತವಿಲ್ಲ ಎನ್ನುತ್ತಿದ್ದಾರೆ.
ಬಂಗಾರಪೇಟೆ ತಹಶೀಲ್ದಾರ್ ದಯಾನಂದ್ 2021ರ ಏಪ್ರಿಲ್ 26 ರಂದು ಬಂಗಾರಪೇಟೆ ಪೊಲೀಸ್ ಠಾಣೆಗೆ ಶಾಸಕರ ಬಗರ್ಹಕುಂ ಭೂಮಿ ಮಂಜೂರಾತಿಗೆ ಸಂಬಂಧಿಸಿದಂತೆ ದಾಖಲೆಗಳು ನಾಪತ್ತೆಯಾಗಿದೆ ಎಂದು ಕಂದಾಯ ಇಲಾಖೆ ಸಿಬ್ಬಂದಿ ವಿರುದ್ಧವೇ ದೂರು ನೀಡಿರುವುದು ಮತ್ತೊಂದು ಅಂಶ. ಇದು ಶಾಸಕರು ತಮ್ಮ ಪ್ರಭಾವ ಬಳಸಿ ಮೂಲ ದಾಖಲೆಗಳನ್ನು ನಾಪತ್ತೆ ಮಾಡಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಂಡರಾ ಎನ್ನುವ ಅನುಮಾನ ಕೂಡ ಮೂಡಿಬರುತ್ತಿದೆ.
ಒಟ್ಟಾರೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಿರುದ್ಧ ಸರ್ಕಾರಿ ಜಮೀನು ಕಬಳಿಕೆ ಆರೋಪ ದಾಖಲೆ ಸಹಿತವಾಗಿದ್ದು, ಅದಕ್ಕೆ ಬೇಕಾದ ದಾಖಲೆಗಳು, ಶಾಸಕರ ಪ್ರಭಾವವೂ ಇರಬಹುದು. ಇಲ್ಲಾ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯ ಕೈವಾಡವೂ ಇರಬಹುದು, ನಿಷ್ಪಕ್ಷಪಾತ ತನಿಖೆ ನಡೆದಾಗ ಮಾತ್ರ ಈ ಎಲ್ಲಾ ಆರೋಪಗಳಿಗೆ ಸರಿಯಾದ ಉತ್ತರ ಸಿಗಲಿದೆ.