ರಾಯಚೂರು: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ದೇವದುರ್ಗ ಬಿಜೆಪಿ ಶಾಸಕ ಕೆ.ಶಿವನಗೌಡ ನಾಯಕ್ (Shivana Gowda Nayak), ಗಂಡಸುತನದ ಸವಾಲ್ ಹಾಕಿದ್ದಾರೆ.
ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಶಿವನಗೌಡ ನಾಯಕ್, ಕುಮಾರಸ್ವಾಮಿ (HD Kumaraswamy) ತಮ್ಮ ಅಣ್ಣನ ಹೆಂಡತಿಗೆ ಹಾಸನದ ಟಿಕೆಟ್ ಕೊಡಲು ಆಗದೆ ಗೊಂದಲ ಬಗೆಹರಿಸಲಾಗುತ್ತಿಲ್ಲ. ನೀನು ಗಂಡಸಾಗಿದ್ರೆ ದೇವದುರ್ಗ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಿಸು ಅಂತ ಶಿವನಗೌಡ ನಾಯಕ್ ಸವಾಲೆಸೆದಿದ್ದಾರೆ.
1 ಲಕ್ಷ 50 ಸಾವಿರ ವೋಟು ತಗೊಂಡು ಗೆಲ್ಲುತ್ತೇನೆ, ಕಡಿಮೆ ವೋಟಲ್ಲಿ ಗೆದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೆನೆ. ಇದು ನನ್ನ ಸವಾಲು ಅಂತ ಶಿವನಗೌಡ ನಾಯಕ್ ವಿಜಯ ಸಂಕಲ್ಪ ಯಾತ್ರೆಯಲ್ಲಿ ಘೋಷಿಸಿದ್ದಾರೆ. ಇದನ್ನೂ ಓದಿ: ದೇವೇಗೌಡರ ಆಸೆ ಪೂರೈಸಲು ಸಾಹಸಕ್ಕೆ ಕೈ ಹಾಕಿದ್ದೇನೆ – ಹೆಚ್ಡಿಕೆ ಶಪಥ
ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದು ಶ್ರೀರಾಮುಲು (Sriramulu). 1978 ರ ಬಳಿಕ ಸಿಎಂ ಬೊಮ್ಮಾಯಿಗೆ ಅತೀ ಹೆಚ್ಚು ಮೀಸಲಾತಿ ಬೇಡಿಕೆ ಬಂದವು. ಹಿಂದೆ ಎಸ್.ಎಂ ಕೃಷ್ಣ ಸಿಎಂ ಇದ್ದಾಗ ನಟ ರಾಜ್ ಕುಮಾರ್ (Dr. Raj Kumar) ರನ್ನ ಕಿಡ್ನಾಪ್ ಮಾಡಿರೋ ಸಂಕಷ್ಟ ಎದುರಾಗಿತ್ತು. ಆದರೆ ನೂರು ರಾಜ್ ಕುಮಾರನನ್ನ ಹಿಡಿದುಕೊಂಡು ಹೋಗಿರೋ ರೀತಿ ಸಂಕಷ್ಟ ಸಿಎಂ ಬೊಮ್ಮಾಯಿಗೆ ಬಂದಿದ್ದವೆ ಎಂದರು.
ನನ್ನ ಕ್ಷೇತ್ರಕ್ಕೆ ವಿದ್ಯುತ್ ಸಮಸ್ಯೆ ಇದೆ. ವಿದ್ಯುತ್ ಟಿಸಿ ಬೇಕು ಅನ್ನೋದು ದೊಡ್ಡ ಬೇಡಿಕೆ ಇದೆ. ಈ ಬಾರಿ ಬಿಜೆಪಿ ಸರ್ಕಾರ ಬಂದ ಬಳಿಕ, ಮೊದಲು ಈ ಭಾಗದ ರೈತರ ವಿದ್ಯುತ್ ಸಮಸ್ಯೆ ಪರಿಹರಿಸ್ತಿವಿ. ಬೇರೆ ಪಾರ್ಟಿಯವರು ನಾಯಿಗಳು ಇದ್ದಂಗೆ. ನನ್ನ ವಿರುದ್ಧ ನಾಯಿ ಬೊಗಳೊ ರೀತಿ ಬೊಗಳೆ ಬಿಡಲಿ. ನಾನು ಆನೆ ಇದ್ದಂಗೆ, ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ. ರಾಯಚೂರು ಜಿಲ್ಲೆಯಲ್ಲಿ ಏಳು ಕ್ಷೇತ್ರದಲ್ಲಿ ಐದು ಸೀಟು ಗೆಲ್ಲುತ್ತೇವೆ. ಸವಾಲು ಅಂದ್ರೆ ಮೀಸೆ ಬೋಳಿಸಿಕೊಳ್ಳೊವಂಥದ್ದು ನಂದು. ಬಿಜೆಪಿ ಕಾರ್ಯಕರ್ತರು ನರಿ ಮರಿಗಳಲ್ಲ, ಹುಲಿ ಮರಿಗಳು. ನಾವು ಬೇಡ ಸಮುದಾಯದವರು ಸುರಪುರದಲ್ಲಿ ಬ್ರಿಟಿಷರನ್ನ ಓಡಿಸಿದೋರು ಅಂತ ಶಿವನಗೌಡ ನಾಯಕ್ ಹೇಳಿದರು.