ತುಮಕೂರು: ಹೇಮಾವತಿ ನಾಲೆಗೆ ಡೈನಾಮೈಟ್ ಇಡುತ್ತೇನೆ. ತಾಕತ್ತಿದ್ದರೆ ತಡೆಯಿರಿ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೇಮಾವತಿ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಶಿವಲಿಂಗೇಗೌಡ ಅವರು, ಅರಸೀಕೆರೆ ತಾಲೂಕಿನಲ್ಲಿ ಒಂದಿಂಚು ಮಳೆಯಾಗಿಲ್ಲ. ನಮ್ಮ ತಾಲೂಕಿನ ಕೆರೆಗಳು ತುಂಬುತ್ತಿಲ್ಲ. ಇದಕ್ಕೆ ಲಿಫ್ಟ್ ಇರಿಗೇಷನ್ ಯಾಕೆ ಬೇಕು. ಹೀಗೆ ಆದರೆ ನಾಲೆಗೆ ಡೈನಾಮೈಟ್ ಇಡ್ತೀನಿ. ಅದೇನ್ ಮಾಡ್ಕೊಳ್ತಿರೋ ಮಾಡ್ಕೊಳ್ಳಿ. ಅದೇನಾಗುತ್ತೋ ನೋಡೇ ಬಿಡೋಣ. ಕೇಸ್ ಆಗುತ್ತಾ ಆಗಲಿ, ಡೈನಾಮೈಟ್ ಇಟ್ಟೇ ಇಡ್ತೀನಿ ಎಂದು ತಿಪಟೂರು ಮೂಲಕ ಅರಸೀಕೆರೆಗೆ ಹರಿಯಬೇಕಾದ ನೀರು ಸಮರ್ಪಕವಾಗಿ ಹರಿಸದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಭೆ ನಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಂತರ ಕೆಲವು ಕಡೆ ನೀರು ಬಿಡದೇ ಹೊಡೆದಾಡುತ್ತಿದ್ದಾರೆ. ನಮಗೆ ನೀರು ಕೊಡುತ್ತಿಲ್ಲ ಇದರಿಂದ ಜನರು ರೊಚ್ಚಿಗೆದ್ದಿದ್ದಾರೆ. ತಿಪಟೂರು ಭಾಗದಲ್ಲಿ ಆರು ಕೆರೆ ನೀರು ಹೋಗಬೇಕು. ತಿಪಟೂರು ಜಾಗದ ನಾಲ್ಕು-ಐದು ಹಳ್ಳಿಯವರು ನೀರು ನೀಡುತ್ತಿದ್ದಂತೆ ಪೈಪನ್ನು ಒಡೆದುಹಾಕುತ್ತಾರೆ. ಮೂರು ನಾಲ್ಕು ವರ್ಷಗಳಿಂದ ಇದೇ ರೀತಿಯ ಕೆಲಸಗಳು ನಡೆಯುತ್ತಿವೆ. ಈ ಬಾರಿ ಅತಿ ಹೆಚ್ಚಾಗಿ ಮಾಡುತ್ತಿದ್ದಾರೆ. ಅದರಿಂದ ನಾವು ರಕ್ಷಣೆ ಕೊಡಿ ಎಂದು ಕೇಳಿ ಆಗಿದೆ. ಜನರು ರೊಚ್ಚಿಗೆದ್ದು ನಾವೇ ತಡೆಹಿಡಿಯುತ್ತವೆ ಎಂದು ಬರುತ್ತಾರೆ. ಆದರೂ ನಾವು ಶಾಂತಿಯಿಂದ ಇದ್ದೇವೆ. ಹೀಗಾಗಿ ನಾನು ಸಭೆಯಲ್ಲಿ ಆಕ್ರೋಶದ ಮಾತನ್ನು ಆಡಿದ್ದೇನೆ ಎಂದು ತಿಳಿಸಿದರು.
ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಚಿವ ರೇವಣ್ಣ, ಎಸ್.ಆರ್ ಶ್ರೀನಿವಾಸ್, ಸಿಎಎಸ್ ಪುಟ್ಟರಾಜು ಉಪಸ್ಥಿತರಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv