ಚೆನ್ನೈ: ಹಿಂದಿ ಹೇರಿಕೆ (Hindi imposition) ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಹಿರಿಯ ಡಿಎಂಕೆ ಕಾರ್ಯಕರ್ತರೊಬ್ಬರು ಮೈಗೆ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ಸೇಲಂ ಜಿಲ್ಲೆಯ ಪಕ್ಷದ ಕಚೇರಿ ಬಳಿ ನಡೆದಿದೆ.
ಗಾಯಗೊಂಡಿರುವ ವ್ಯಕ್ತಿಯನ್ನು ಡಿಎಂಕೆ ರೈತ (DMK farmer) ವಿಭಾಗದ ಮಾಜಿ ಕಾರ್ಯಕರ್ತ 85 ವರ್ಷದ ತಂಗವೇಲ್ ಎಂದು ಗುರುತಿಸಲಾಗಿದೆ. ಪಕ್ಷದ ಕಚೇರಿ ಮುಂದೆ ಶನಿವಾರ ತಂಗವೇಲ್ ಅವರು ಹಿಂದಿ ಹೇರಿಕೆ ವಿರುದ್ಧ ಘೋಷಣೆಯನ್ನು ಕೂಗುತ್ತಾ, ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಇದೇ ವೇಳೆ ಪಕ್ಷದ ಕೆಲವು ಕಾರ್ಯಕರ್ತರು ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟೋತ್ತಿಗೆ ಬೆಂಕಿ ಮೈ ತುಂಬಾ ಹರಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: `ಗಾಲ್ವಾನ್ ಸೇಸ್ ಹಾಯ್’ – ರಿಚಾ ಚಡ್ಡಾ ಬೆಂಬಲಿಸಿದ ನಟ ಪ್ರಕಾಶ್ ರಾಜ್
ತಮಿಳು ಭಾಷೆ ಇರುವಾಗ ಹಿಂದಿ ಹೇರುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರವನ್ನು ಉದ್ದೇಶಿಸಿ ಬರೆದ ಕಾಗದವನ್ನು ಪ್ರತಿಭಟನಾಕಾರರಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮತ್ತೊಂದೆಡೆ ವ್ಯಕ್ತಿಯ ಸಾವಿಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (Chief Minister MK Stalin) ಅವರು, ಇನ್ಮುಂದೆ ಯಾರು ಪ್ರಾಣ ಕಳೆದುಕೊಳ್ಳಬಾರದು. ಹಿಂದಿ ಹೇರಿಕೆಯ ವಿರುದ್ಧ ರಾಜಕೀಯವಾಗಿ ಮತ್ತು ಪ್ರಜಾಸತ್ತಾತ್ಮಕವಾಗಿ ಹೋರಾಟ ಮುಂದುವರಿಸುತ್ತೇವೆ. ಕೇಂದ್ರ ಸರ್ಕಾರದಿಂದ (Central Government) ಪ್ರತಿಕ್ರಿಯೆ ಬರುವವರೆಗೂ ನಾವು ವಿಶ್ರಮಿಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೈಸೂರಿನ ವಿವಾದಿತ ಗುಂಬಜ್ ಬಸ್ ನಿಲ್ದಾಣ – ಮೂರರಲ್ಲಿ 2 ಗೋಪುರ ತೆರವು