ಹಾಸನ: ಅಂಗಡಿ ಮುಂದೆ ನಿಲ್ಲಿಸಿದ್ದ ಬೈಕ್ಗೆ ಕಿಡಿಗೇಡಿಯೊಬ್ಬ ಬೆಂಕಿ ಇಟ್ಟು ಪರಾರಿಯಾಗಿದ್ದಾನೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ರೇಣುಕಾಂಬ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಎಂಜಿ ಗ್ರಾಫಿಕ್ಸ್ ಮಾಲೀಕ ಮುಬಷಿರ್ ಅಹಮದ್ ಎಂಬವರಿಗೆ ಸೇರಿದ ಬಜಾಜ್ ಪಲ್ಸರ್ ಬೈಕ್ ಇದಾಗಿದ್ದು, ಬೆಂಕಿಯಿಂದ ಸಂಪೂರ್ಣ ಸುಟ್ಟು ಕರಕಲಾಗಿದೆ.
ಮಧ್ಯರಾತ್ರಿ ಬರುವ ಕಿಡಿಗೇಡಿ ಮೊದಲು ಬೈಕ್ನ ಪೆಟ್ರೋಲ್ ಪೈಪ್ ಕಿತ್ತು, ಪೆಟ್ರೋಲ್ ಬಿಟ್ಟು ನಂತರ ಜೇಬಿನಿಂದ ಬೆಂಕಿ ಪೊಟ್ನ ತೆಗೆದು ಕಡ್ಡಿ ಗೀರಿ ಬೆಂಕಿ ಹಚ್ಚಿದ್ದಾನೆ. ಇದರಿಂದ ಕೂಡಲೇ ಬೆಂಕಿ ಹೊತ್ತಿಕೊಂಡಿದೆ. ರಾತ್ರಿ ಅಂಗಡಿಯಲ್ಲಿಯೇ ಕೆಲಸ ಮಾಡುತ್ತಿದ್ದ ಮಾಲೀಕ ಹೊರಕ್ಕೆ ಬಂದು ನೋಡಿದಾಗ ವಿಚಾರ ಬೆಳಕಿಗೆ ಬಂದಿದೆ.
ಕಿಡಿಗೇಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ತಕ್ಷಣ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡ ಚನ್ನರಾಯಪಟ್ಟಣ ನಗರ ಪೊಲೀಸರು ಕಿಡಿಗೇಡಿ ಬಂಧನಕ್ಕೆ ಬಲೆ ಬೀಸಿದ್ದಾರೆ.