ಹಾಸನ: ಬೇಲೂರಿನ (Belur) ಕಿತ್ತಾವರ ಗ್ರಾಮದ ಭಾಗದಲ್ಲಿ ಒಂಟಿ ಸಲಗವೊಂದು ಜನರಿಗೆ ವಿಪರೀತ ತೊಂದರೆ ಕೊಡುತ್ತಿದೆ. ಹಗಲಿನ ವೇಳೆ ಕಾಡು, ಕಾಫಿ ಎಸ್ಟೇಟ್ಗಳಲ್ಲಿ ವಿಶ್ರಾಂತಿ ಪಡೆಯುವ ಕಾಡಾನೆ (Elephant) ರಾತ್ರಿ ವೇಳೆ ಪುಂಡಾಟಕ್ಕೆ ಇಳಿಯುತ್ತಿದೆ. ರಸ್ತೆಯಲ್ಲಿ ಓಡಾಡುವ ಜನ, ವಾಹನಗಳ ಮೇಲೆ ಹಠಾತ್ ದಾಳಿ ಮಾಡಿ ಜನರ ನಿದ್ದೆಗೆಡಿಸುತ್ತಿದೆ.
ಕಿತ್ತಾವರ ಗ್ರಾಮದ ಬಳಿ ಕಾಡಾನೆ ಬೀಡುಬಿಟ್ಟಿದ್ದು ಹಗಲು ವೇಳೆ ಕಾಫಿ ತೋಟಗಳಲ್ಲಿ ವಿಶ್ರಾಂತಿ ಪಡೆದು, ರಾತ್ರಿ ವೇಳೆ ಗ್ರಾಮಗಳೊಳಗೆ ಎಂಟ್ರಿ ಕೊಡುತ್ತಿದೆ. ಯಾವುದೇ ಕಾಡಾನೆ ಗುಂಪಿಗೆ ಸೇರದೆ ಒಂಟಿಯಾಗಿ ಓಡಾಡುತ್ತಿದೆ. ಕೆಲ ತಿಂಗಳ ಹಿಂದೆ ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸಿದ್ದರು. ಇದೀಗ ರೇಡಿಯೋ ಕಾಲರ್ ಇಲ್ಲದಿರುವುದರಿಂದ ಕಾಡಾನೆ ಲೋಕೇಷನ್ ಕಂಡು ಹಿಡಿಯಲು ಇಟಿಎಫ್ ಸಿಬ್ಬಂದಿ ಪರದಾಡುತ್ತಿದ್ದಾರೆ. ಇದನ್ನೂ ಓದಿ: ಕಾರಿನ ಮೇಲೆ ಕಾಡಾನೆ ದಾಳಿ – ಚಾಲಕನ ಸಮಯಪ್ರಜ್ಞೆಯಿಂದ ಕುಟುಂಬ ಪಾರು
ಕೆಲ ದಿನಗಳ ಹಿಂದೆ ಜನರಿದ್ದ ಕಾರನ್ನು ಕೋರೆಯಿಂದ ಎತ್ತಿ ಈ ಕಾಡಾನೆ ಜಖಂಗೊಳಿಸಿತ್ತು. ಜು.29 ರಂದು ಧರ್ಮರಾಜು ಎಂಬುವವರ ಸಾವಿಗೆ ಇದೇ ಕಾಡಾನೆ ಕಾರಣ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಶಂಕೆ ವ್ಯಕ್ತಪಡಿಸಿದ್ದಾರೆ. ಒಂಟಿಸಲಗದ ಹಾವಳಿಯಿಂದ ಸ್ಥಳೀಯರು ಭಯಭೀತರಾಗಿದ್ದು ಕೂಡಲೇ ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮರಿಗಳ ಜೊತೆ ಕಾಡಾನೆಗಳ ದಾಂಧಲೆ – ಸುಮಾರು 8 ಎಕರೆ ಪ್ರದೇಶದ ಕಾಫಿ ತೋಟ ನಾಶ



