ರಾಯಚೂರು: ನಟರಾದ ಯಶ್ ಮತ್ತು ದರ್ಶನ್ ದುಡಿಯುವ ಬಾಡಿಗೆ ಜೋಡಿ ಎತ್ತುಗಳು. ಮಂಡ್ಯ ಜನರ ಕಷ್ಟ-ಸುಖಗಳಿಗೆ ಸಿನಿಮಾದವರು ಭಾಗಿಯಾಗಿಲ್ಲ ಎಂದು ಪಶು ಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.
ನಗರದಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಸಭೆಗೂ ಮುನ್ನ ಮಾತನಾಡಿದ ನಾಡಗೌಡ, ಮಂಡ್ಯದ ಕನಕನಮರಡಿಯಲ್ಲಿ ಬಸ್ ಕಾಲುವೆಗೆ ಬಿದ್ದಾಗ ಸಿನಿಮಾದವರು ಎಲ್ಲಿ ಹೋಗಿದ್ದರು. ಇಂದು ಚುನಾವಣೆಗೆ ಬಂದಿದ್ದಾರೆ ಅಂದ್ರೆ ಅವರು ಬಾಡಿಗೆ ಎತ್ತುಗಳು ಎಂದು ಗರಂ ಆದ್ರು.
ಇದು ತಮಿಳುನಾಡು ಆಂಧ್ರಪ್ರದೇಶ ಅಲ್ಲ. ಇಲ್ಲಿ ಸಿನಿಮಾ ಹೆಸರಲ್ಲಿ ಚುನಾವಣೆ ಗೆಲ್ಲೋಕೆ ಆಗಲ್ಲ. ಸಿನಿಮಾ ನಟರನ್ನು ನೋಡಲು ಜನ ಬರುತ್ತಾರೆ. ಆದ್ರೆ ಅವರೆಲ್ಲ ವೋಟು ಹಾಕಲ್ಲ. ಸುಮಲತಾ ಸಿನಿಮಾ ಬಿಟ್ಟು ರಾಜಕೀಯಕ್ಕೆ ಹೋದಾಗ ಗೊತ್ತಾಗುತ್ತದೆ. ಸಿನಿಮಾ ನೋಡಲು ಬಂದವರೆಲ್ಲ ವೋಟು ಹಾಕಲ್ಲ. ಮಾಧ್ಯಮದವರು ಬಿಂಬಿಸಿದಂತೆ ಮಂಡ್ಯ ಚುನಾವಣೆ ಯಾವುದೇ ರೀತಿಯ ಟಫ್ ಇಲ್ಲ ಎಂದು ಹೇಳಿದ್ರು.
ಬಿಜೆಪಿಯನ್ನ ದೂರ ಇಡುವ ಸಲುವಾಗಿ ಮೈತ್ರಿ ಸರ್ಕಾರ ನಡೆಸುತ್ತಿದ್ದೇವೆ. ಹೀಗಾಗಿ ಮೈತ್ರಿ ಅಭ್ಯರ್ಥಿ ಬಿವಿ ನಾಯಕ್ ಗೆಲುವು ಖಚಿತ. ಜೆಡಿಎಸ್ನ ಸಂಪೂರ್ಣ ಬೆಂಬಲ ಕಾಂಗ್ರೆಸ್ ಗೆ ಇದೆ. ಬಿವಿ ನಾಯಕ್ ಗೆಲುವಿಗೆ ನಮ್ಮ ಬೆಂಬಲ ಇದೆ. ಕಾಂಗ್ರೆಸ್, ಜೆಡಿಎಸ್ ಮತ ನಮಗೆ ಬರುತ್ತವೆ ಎಂದು ಬಿಜೆಪಿಯವರು ಕನಸು ಕಾಣುತ್ತಿದ್ದಾರೆ. ಈ ಹಿಂದೆ ಜಾತ್ಯಾತೀತ ಮತಗಳು ಹಂಚಿ ಹೋಗುತ್ತಿದ್ದವು. ಆದ್ರೆ ಈಗ ಅದಕ್ಕೆ ಅವಕಾಶ ಇಲ್ಲ. ಮುಂಚೆ ಕಾಂಗ್ರೆಸ್, ಜೆಡಿಎಸ್ ಬೇರೆ ಬೇರೆಯಾಗಿ ಸ್ಪರ್ಧೆ ಮಾಡುತ್ತಿದ್ದವು. ಹೀಗಾಗಿ ಮತಗಳು ವಿಭಜನೆ ಆಗುತ್ತಿದ್ದವು. ಈಗ ಹಾಗಲ್ಲ, ನಮ್ಮ ಪಕ್ಷದ (ಜೆಡಿಎಸ್) ಕೆಲ ಮುಖಂಡರಲ್ಲಿ ಅಸಮಾಧಾನ ಇದೆ. ಅದೆಲ್ಲ ಸರಿ ಹೋಗುತ್ತದೆ ಎಂದು ಹೇಳಿದ್ರು.
ಇದೇ ವೇಳೆ ಸಂಸದ ಬಿ.ವಿ.ನಾಯಕ್ ಮಾತನಾಡಿ, ನಾನು ಪಾಕಿಸ್ತಾನ ಪರ ಯಾವುದೇ ಹೇಳಿಕೆ ನೀಡಿಲ್ಲ. ಭಾರತಕ್ಕೆ ಪಾಕಿಸ್ತಾನ ಯಾವುದಕ್ಕೂ ಸಮವಲ್ಲ. ಸಣ್ಣ ದೇಶದ ಮೇಲೆ ಮೋದಿ ದಾಳಿ ಮಾಡಿದ್ದಾರೆ ಎಂದು ಹೇಳಿದ್ದೇನೆ ಅದನ್ನ ತಿರುಚಲಾಗಿದೆ ಅಂತ ಬಿ.ವಿ.ನಾಯಕ್ ಹೇಳಿದರು.