ವಿಜಯಪುರ: ಸ್ವಂತ ಮನೆಯಿಂದ ಹೊರಗೆ ಹಾಕಿದಾಗ ನಿಮಗೆ ಅನ್ಯಾಯ, ಅಪಮಾನ ಆದಾಗ ಯಾಕೆ ಬಿಟ್ಟು ಬಂದ್ರಿ? ಇದನ್ನು ನಾನು ಹೇಳಬೇಕಿಲ್ಲ, ಅವರೇ ಬಿಜೆಪಿಯಿಂದ ಅನ್ಯಾಯ, ಅಪಮಾನ ಆಗಿದೆ ಅಂದಿದ್ರು. ಮೊನ್ನೆಯವರಿಗೆ ಬಿಜೆಪಿ ಅನ್ಯಾಯದ ಬಗ್ಗೆ ಹೇಳುತ್ತಾ ಬಂದಿದ್ರು ಎಂದು ಸಚಿವ ಎಂ.ಬಿ ಪಾಟೀಲ್ (MB Patil) ಕಿಡಿಕಾರಿದರು.
ಬಿಜೆಪಿ ಸ್ವಂತ ಮನೆಗೆ ಮರಳಿದೆ ಎಂದು ಜಗದೀಶ್ ಶೆಟ್ಟರ್ (Jagadish Shettar) ಹೇಳಿಕೆಗೆ ಪ್ರತಿಕ್ರಿಯಿಸಿ, ಮಾಜಿ ಮುಖ್ಯಮಂತ್ರಿ ಆಗಿದ್ದವರಿಗೆ ಬಿಜೆಪಿ ಒಂದು ಎಂಎಲ್ಎ ಟಿಕೆಟ್ ಕೊಡಲಿಲ್ಲ. ನನ್ನ ಮಂತ್ರಿ ಮಾಡಬೇಡಿ ಎಂಎಲ್ಎ ಟಿಕೆಟ್ ಕೊಡಿ ಅಂದಿದ್ರು. ಎಂಎಲ್ಎ ಟಿಕೆಟ್ ಕೊಡದಿದ್ದಾಗ ನಾವು ಕರೆದು ಎಂಎಲ್ಎ ಟಿಕೆಟ್ ಕೊಟ್ಟೆವು. ಸೋತ ಮೇಲೆ ಅವರ ಗೌರವಕ್ಕೆ ತಕ್ಕಂತೆ ಚಿಂತಕರ ಚಾವಡಿ, ಎಂಎಲ್ಸಿ ಸ್ಥಾನ ಕೊಟ್ಟಿದ್ದೆವು. ಜಗದೀಶ್ ಶೆಟ್ಟರ್ ಲೋಕಸಭೆಗೆ ಬಯಿಸಿದ್ರೆ ಮುಂದೆ ಟಿಕೆಟ್ ಕನ್ಸಿಡರ್ ಮಾಡುವುದಾಗಿತ್ತು. ಇಷ್ಟೆಲ್ಲಾ ಗೌರವ ಕೊಟ್ಟ ಮೇಲೆ ಬಂದು ವಾಪಸ್ ಹೋಗಿರುವುದು ಅವರ ಘನತೆಗೆ ಶೋಭೆ ತರುವಂತಹದ್ದಲ್ಲ ಎಂದರು.
ಮರಳಿ ಬಿಜೆಪಿ ಸೇರ್ಪಡೆಯಾಗಿ ಜಗದೀಶ್ ಶೆಟ್ಟರ್ ಸಣ್ಣವರಾಗಿದ್ದಾರೆ. ಅವರ ವ್ಯಕ್ತಿತ್ವಕ್ಕೆ ಚ್ಯುತಿ ಬರುತ್ತಿದೆ, ನಮಗೇನೂ ಹಾನಿ ಆಗಲ್ಲ. ಇದರಿಂದ ಜಗದೀಶ್ ಶೆಟ್ಟರ್ ವ್ಯಕ್ತಿತ್ವಕ್ಕೆ ಬಹುದೊಡ್ಡ ಪೆಟ್ಟು ಬಿದ್ದಿದೆ. ಅವರ ಘನತೆಗೆ ಈ ಕೆಲಸ ಮಾಡುವಂತದ್ದಲ್ಲ. ಬಿಜೆಪಿಗೆ ವಾಪಸ್ ಹೋಗಿದ್ದಕ್ಕೆ ಜಗದೀಶ್ ಶೆಟ್ಟರ್ ಕಾರಣ ಏನು ಹೇಳ್ತಿದ್ದಾರೆ. ಬಿಜೆಪಿ ಕಾರ್ಯಕಾರಿಣಿ ಒತ್ತಡದಿಂದ ಮತ್ತೆ ಬಿಜೆಪಿಗೆ (BJP) ಸೇರ್ಪಡೆ ಎಂದಿರುವ ಜಗದೀಶ್ ಶೆಟ್ಟರ್ ಹೇಳಿಕೆಗೆ ಏನು ಒತ್ತಡ ಇತ್ತು. ಆಗ ಯಾಕೆ ಕಾಂಗ್ರೆಸ್ಗೆ ಬಂದ್ರಿ, ನಿಮಗೆ ಯಾಕೆ ಟಿಕೆಟ್ ಕೊಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಶೆಟ್ಟರ್, ಜೋಶಿ ಒಂದು ನಾಣ್ಯದ ಎರಡು ಮುಖದ ರೀತಿ ಕೆಲಸ ಮಾಡಿದ್ದಾರೆ: ವಿ ಸೋಮಣ್ಣ
ಜಗದೀಶ್ ಶೆಟ್ಟರ್ಗೆ ಬಿಜೆಪಿಯಿಂದ ಇಡಿ, ಐಟಿ ಅಸ್ತ್ರ ಬಳಸಿದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದನ್ನು ಅವರನ್ನೇ ಕೇಳಬೇಕು, ಐಟಿ, ಇಡಿ ಆಗಿದ್ರೆ ನಾನು ಹೇಗೆ ಹೇಳಲಿ. ಅವರಿಗೆ ಏನು ಆಮಿಷ ಒಡ್ಡಿದ್ದಾರೆ ಅನ್ನೋದು ಹೇಳಬೇಕಲ್ಲ. ಬಿಜೆಪಿಗೆ ವಾಪಸ್ ಜಗದೀಶ್ ಶೆಟ್ಟರ್ ಹೋಗಿದ್ದರಿಂದ ಲಾಭ ನಷ್ಟ ಏನಿಲ್ಲ ಯಥಾ ಸ್ಥಿತಿ ಮುಂದುವರಿಯುತ್ತೆ. ಜಗದೀಶ್ ಶೆಟ್ಟರ್ ಬಿಜೆಪಿಗೆ ಮರಳಿರುವುದು ಅವರ ವ್ಯಕ್ತಿತ್ವಕ್ಕೆ ಕಳಂಕ, ಚ್ಯುತಿ ಬರುವಂತಾಗಿದೆ ಅಂತ ಬಹಳ ಸ್ಪಷ್ಟವಾಗಿ ಹೇಳುವೆ ಎಂದರು.