ಬೆಂಗಳೂರು: ಮಿಡ್ ಡೇ ಮೀಲ್ಸ್ ಉತ್ತಮವಾಗಿ ನಡೆಯುತ್ತಿದೆ. ಮಕ್ಕಳಿಗೆ ಪೌಷ್ಟಿಕಾಹಾರ ನೀಡಲು ನಿರ್ಧಾರ ಮಾಡಲಾಗಿದೆ. ಮಧ್ಯಾಹ್ನ ಬಿಸಿಯೂಟದ ಜೊತೆ ರಾಗಿ ಮಾಲ್ಟ್ ಕೊಡುವ ನಿರ್ಧಾರ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಅವರು, ಮುಂದಿನ ತಿಂಗಳಿಂದ ಪ್ರೊಗ್ರಾಮ್ ಲಾಂಚ್ ಮಾಡ್ತೀವಿ. ಮಕ್ಕಳಿಗೆ ಪೌಷ್ಟಿಕಾಂಶ ನೀಡುವ ನಿಟ್ಟಿನಲ್ಲಿ ರಾಗಿ ಮಾಲ್ಟ್ ನೀಡುವ ನಿರ್ಧಾರ ಮಾಡಿದ್ದೇವೆ. ಒಂದು ಎನ್ಜಿಒ ಎರಡು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಿದ್ರು. ಅದು ಯಶಸ್ವಿಯಾಗಿದೆ. ಹೀಗಾಗಿ ಇದನ್ನು ಜಾರಿ ಮಾಡಲು ನಿರ್ಧಾರ ಮಾಡಲಾಗಿದೆ. ಕ್ಷೀರಭಾಗ್ಯದ ಹಾಲಿನ ಜೊತೆ ಬೆಳಗ್ಗೆ ರಾಗಿಗಂಜಿ ಕೊಡುವ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯನ್ನು ಅಜೀಂ ಪ್ರೇಮ್ ಜೀ ಫೌಂಡೇಶನ್ ವತಿಯಿಂದ ಮಾಡಲು ನಿರ್ಧಾರ ಆಗಿದೆ. 6 ತಿಂಗಳಲ್ಲಿ ಎಲ್ಲವೂ ಸರಿ ಆಗುತ್ತದೆ. 3 ಸಾವಿರ ಕೆಪಿಎಸ್ ಶಾಲೆಗಳ ಅಭಿವೃದ್ಧಿಗೆ ನಿರ್ಧಾರ ಮಾಡಲಾಗಿದೆ. ಎರಡು ಗ್ರಾಮ ಪಂಚಾಯಿತಿಗೆ ಒಂದು ಕೆಪಿಎಸ್ ಶಾಲೆ ಅಭಿವೃದ್ಧಿ ಮಾಡಲು ನಿರ್ಧಾರ ಮಾಡಲಾಗಿದೆ. ಎಲ್ಕೆಜಿಯಿಂದ 12 ನೇ ತರಗತಿವರೆಗೂ ಕೆಪಿಎಸ್ ಶಾಲೆಯಲ್ಲಿ ಇರಲಿದೆ. ಮೊದಲ ಬಾರಿಗೆ 3 ಪಬ್ಲಿಕ್ ಪರೀಕ್ಷೆ ಮಾಡ್ತಿದ್ದೇವೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತಿದೆ ಎಂದರು.
ಎಸ್ಇಪಿ ಅನುಷ್ಠಾನ ಆಗಲಿದೆ. ಈ ಬಗ್ಗೆ ಮೊದಲ ಸಭೆ ಆಗಿದೆ. ಎಸ್ಇಪಿ ಇರೋದರಿಂದ ಉತ್ತಮ ಶಿಕ್ಷಣ ವ್ಯವಸ್ಥೆ ನಿರ್ಮಾಣ ಆಗಲಿದೆ. ಎಸ್ಇಪಿ ರಾಜ್ಯ ಪಠ್ಯ ಕ್ರಮವೋ, ಸಿಬಿಎಸ್ಇ ಪಠ್ಯಕ್ಕೋ ಅಂತ ರಿಪೋರ್ಟ್ ಬಂದ ಮೇಲೆ ಗೊತ್ತಾಗಲಿದೆ. ನಮ್ಮ ಸಿಲಬಸ್ ಸಿಬಿಎಸ್ಇ ಗಿಂತ ಉತ್ತಮವಾಗಿ ಇರಲಿದೆ. ವರದಿ ಬಂದ ಬಳಿಕ ಸಿಎಂ ಜೊತೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಮಾಡ್ತೀವಿ ಎಂದು ಮಾಹಿತಿ ನೀಡಿದರು.
10 ಮತ್ತು 12ನೇ ತರಗತಿ ಪರೀಕ್ಷೆಗೆ ಹಿಜಬ್ಗೆ ಅವಕಾಶ ಕೊಡುವ ವಿಚಾರವಾಗಿ ಮಾತನಾಡಿ, ಹಿಜಬ್ ವಿಚಾರ ಕೋರ್ಟ್ನಲ್ಲಿ ಇದೆ. ಈ ಬಗ್ಗೆ ನಾನು ಈಗ ಪ್ರತಿಕ್ರಿಯೆ ಕೊಡೋದು ಸರಿಯಲ್ಲ ಎಂದರು.
ಸಭೆಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಆಯುಕ್ತರಾದ ಬಿ.ಬಿ.ಕಾವೇರಿ, ಪಿ.ಎಂ.ಪೋಷಣ್, ನಿರ್ದೇಶಕರಾದ ಶುಭಾ ಕಲ್ಯಾಣ್, ಅಪರ ಆಯುಕ್ತರಾದ ಜಯಶ್ರೀ ಇದ್ದರು.