ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ನಟಿ ಶೃತಿ ಹರಿಹರನ್ ಎಬ್ಬಿಸಿರೋ ಮೀಟೂ ಬಿರುಗಾಳಿ ಅರ್ಜುನ್ ಸರ್ಜಾರನ್ನು ಬಿಡುವ ಲಕ್ಷಣ ಕಾಣಿಸುತ್ತಿಲ್ಲ. ಈ ನಡುವೆ ಇಂದು ಕೋರ್ಟ್ ಮುಂದೆ ಶೃತಿ ಹೇಳಿಕೆ ದಾಖಲಿಸಲು ಪೊಲೀಸರು ಸಮಯ ಕೇಳಲಿದ್ದಾರೆ. ಸಿಆರ್ಪಿಸಿ 164ರ ಅಡಿಯಲ್ಲಿ ಲೈಂಗಿಕ ಕಿರುಕುಳದಂತ ಕೇಸ್ಗಳಲ್ಲಿ ಸಂತ್ರಸ್ತರು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಬೇಕು. ಅದರಂತೆ ಒಂದು ವೇಳೆ ಕೋರ್ಟ್ ಸಮಯ ನೀಡಿದರೆ ಇಂದೇ ಶೃತಿ ಹೇಳಿಕೆ ದಾಖಲಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.
ವಿಸ್ಮಯ ಸಿನಿಮಾ ಶೂಟಿಂಗ್ ವೇಳೆ ಲೈಂಗಿಕ ಕಿರುಕುಳ ನೀಡಿದ್ದಾರೆ ಅಂತ ಅರೋಪ ಮಾಡಿದ್ದ ನಟಿ ಶೃತಿ ಹರಿಹರನ್ ಬಾಯಿ ಮುಚ್ಚಿಸಲು ಹೊರಟ್ಟಿದ್ದ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾಗೆ ಶುಕ್ರವಾರ ಕೋರ್ಟ್ನಲ್ಲಿ ಹಿನ್ನಡೆಯಾಗಿತ್ತು. ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ ಸೇರಿದಂತೆ ಎಲ್ಲೂ ತಮ್ಮ ವಿರುದ್ಧ ಹೇಳಿಕೆ ನೀಡದಂತೆ ಆದೇಶ ನೀಡುವಂತೆ ಸರ್ಜಾ ಮಾಡಿದ್ದ ಮನವಿಯನ್ನ ಬೆಂಗಳೂರಿನ ಮೆಯೋ ಕೋರ್ಟ್ ಪುರಸ್ಕರಿಸಿರಲಿಲ್ಲ. ಇಂದು ಈ ಪ್ರಕರಣದ ಮಧ್ಯಂತರ ಆದೇಶ ನೀಡುವುದಾಗಿ ಕೋರ್ಟ್ ಹೇಳಿದೆ.
ಶೃತಿ ಹರಿಹರನ್ ಪರ ಸಾಕ್ಷಿಗಳ ಹೇಳಿಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಹೀಗಾಗಿ ಕಬ್ಬನ್ಪಾರ್ಕ್ ಪೊಲೀಸರು ಡ್ರೈವರ್ ಕಿರಣ್, ಮ್ಯಾನೇಜರ್ ಬೋರೆಗೌಡ ಮತ್ತು ಶೃತಿ ಹರಿಹರನ್ ಗೆಳತಿ ಯಶಸ್ವಿನಿಗೆ ಕೂಡ ಇಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದಾರೆ. ಈ ಮೂವರ ಸಾಕ್ಷಿಗಳನ್ನು ಎವಿಡೆನ್ಸ್ ಆಗಿ ಪರಿಗಣಿಸಿ ಆನಂತರ ಅರ್ಜುನ್ ಸರ್ಜಾ ಬಂಧನಕ್ಕೆ ಪೊಲೀಸರು ಕೈ ಹಾಕಲಿದ್ದಾರೆ.
ಮತ್ತೊಂದು ಕಡೆ ಶೃತಿ ಶೂಟಿಂಗ್ಗಾಗಿ ಚೆನ್ನೈಗೆ ತೆರಳಿದ್ದು, ಇಂದು ಕೋರ್ಟ್ ಮುಂದೆ ಬರಲು ನಿರಾಕರಿಸಿದ್ದಾರೆ. ಅಲ್ಲದೆ ನಾಳೆ ಅಥವಾ ನಾಡಿದ್ದಿನವರೆಗೆ ಕಾಲಾವಕಾಶ ನೀಡಲು ಮನವಿ ಮಾಡಿದ್ದಾರೆ. ಇವೆಲ್ಲಾ ಚಕ್ರವ್ಯೂಹವನ್ನು ಬೇದಿಸಿ ಅಭಿಮನ್ಯೂ ಸರ್ಜಾ ಹೇಗೆ ಹೊರಬರ್ತಾರೆ ಅಂತಾ ಕಾದು ನೋಡಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv