– ಜಿಲ್ಲಾಡಳಿತದ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ
ದಾವಣಗೆರೆ: ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲಿ ಬರುವಂತಹ ಒಂದು ಅದ್ಭುತ ಕ್ಷಣ. ಅದರಲ್ಲೂ ನವ ಜೋಡಿಗಳು ಅದ್ಧೂರಿಯಾಗಿ ಮದುವೆಯಾಗಬೇಕೆಂದು ಬಯಸುವುದು ಸಾಮಾನ್ಯ. ಆದ್ರೆ ಇಲ್ಲಿ ಮದುವೆಗೆ ಅದ್ಧೂರಿ ಮಂಟಪವಿಲ್ಲ, ಆಡಂಬರದ ಓಲಗವಿಲ್ಲ, ಪುರೋಹಿತರ ಮಂತ್ರ ಘೋಷವಿಲ್ಲದೇ, ಸರಳವಾಗಿಯೇ ಮದುವೆಯಾಗಿ (Marriage) ವಧು, ವರ ಎಲ್ಲರ ಗಮನ ಸೆಳೆದಿದ್ದಾರೆ.
ಹೌದು. ದಾವಣಗೆರೆ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ನಿಲಯ (Women’s Hostel) ಕುವೆಂಪು ಅವರ ಮಂತ್ರ ಮಾಂಗಲ್ಯ (Mantra Mangalya) ಪದ್ಧತಿಯಂತೆ ಸರಳ ವಿವಾಹ ನೆರವೇರಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ಮಹಿಳಾ ನಿಲಯದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳೇ ಮುಂದೆ ನಿಂತು ವಿವಾಹ ನೆರವೇರಿಸಿದರು.
ದಿವ್ಯಾ ಎಂಬ ಯುವತಿಗೆ ಚಿತ್ರದುರ್ಗದ ನಾಗರಾಜ್ ಎಂಬಾತನ ಜೊತೆಗೆ ವಿವಾಹ ಮಾಡಿಸಲಾಯಿತು. ದಾವಣಗೆರೆ ಜಿಲ್ಲಾಧಿಕಾರಿ ಎಂ.ವಿ ವೆಂಕಟೇಶ್, ಎಸ್ಪಿ ಉಮಾ ಪ್ರಶಾಂತ್ ಅವರೇ ಮುಂದೆ ನಿಂತು ಮದುವೆ ಮಾಡಿಸಿ, ವಧು-ವರರಿಗೆ ಶುಭ ಹಾರೈಸಿದರು. ಇದನ್ನೂ ಓದಿ: ಬಿಟ್ಕಾಯಿನ್ ಕೇಸ್ ತನಿಖೆ IPS ಅಧಿಕಾರಿ ಬುಡಕ್ಕೆ – ಸಂದೀಪ್ ಪಾಟೀಲ್ಗೆ ನೋಟಿಸ್!
ಸರಳ ಮದುವೆ ಸಮಾರಂಭದಲ್ಲಿ ಔತಣ ಕೂಟಕ್ಕೆ ಪಾಯಸ, ಜಿಲೇಬಿ, ಪೂರಿ, ಪನ್ನಿರ್ ಮಸಾಲ, ಅನ್ನ ಸಂಬಾರ್ ಮುಂತಾದ ತಿನಿಸುಗಳ ವ್ಯವಸ್ಥೆ ಮಾಡಲಾಗಿತ್ತು. ಸರಳ ಮದುವೆ ನೆರವೇರಿದ ನಂತರ ವಧು-ವರರಿಗೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆ ನೋಂದಣಿ ಮಾಡಿಸಲಾಯಿತು.
ಸದ್ಯ, ವಧುವಿನ ಹೆಸರಲ್ಲಿ 15 ಸಾವಿರ ರೂ. ಮೊತ್ತದ ಬಾಂಡ್ ಅನ್ನು ಇಡಲಾಗಿದ್ದು, ಮೂರು ವರ್ಷಗಳ ನಂತರ ಬಡ್ಡಿಯ ಸಮೇತ ಹಣ ಹಿಂದಿರುಗಿಸಲಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ತೆರೆಯ ಮೇಲೆ ಕಬಡ್ಡಿ ಆಟಗಾರನ ದುರಂತದ ಕಥೆ: ಪರ್ಶು ಚಿತ್ರಕ್ಕೆ ಸುನಿ ಸಾಥ್