ಮಂಗಳೂರು: ಮನೆಯಲ್ಲೇ ಸೋಮಾರಿಯಾಗಿದ್ದ ಮಗನನ್ನು ಕೆಲಸಕ್ಕೆ ಹೋಗು ಎಂದಿದ್ದಕ್ಕೆ ಸಿಟ್ಟಿಗೆದ್ದು ಆತ ತಂದೆಯ ಕತ್ತನ್ನೇ ಕಡಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರಿನ ಪಾಣಾಜೆ ಗ್ರಾಮದ ಬೊಳ್ಳಿಂಬಳ ಗ್ರಾಮದ ನಿವಾಸಿ ಕೃಷ್ಣ ನಾಯ್ಕ್(65) ಮೃತ ದುರ್ದೈವಿ. ಉದಯ್ ನಾಯ್ಕ್(28) ಕೊಲೆ ಮಾಡಿದ ಪಾಪಿ ಮಗ. ಕೃಷ್ಣ ನಾಯ್ಕ್ ತನ್ನ ಪತ್ನಿ ಹಾಗೂ ಮಗನೊಂದಿಗೆ ವಾಸವಾಗಿದ್ದರು. ಮಗ ವಯಸ್ಸಿಗೆ ಬಂದಿದ್ದರು ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದು ಸೋಮಾರಿಯಾಗಿದ್ದನು. ಅಲ್ಲದೆ ಮನೆಯಲ್ಲಿ ಬಡತನವಿದ್ದ ಹಿನ್ನೆಲೆ ಕೃಷ್ಣನಾಯ್ಕ್ ಪ್ರತಿದಿನ ಮಗನನ್ನು ಕೆಲಸಕ್ಕೆ ಹೋಗುವಂತೆ ಒತ್ತಾಯಿಸುತ್ತಿದ್ದರು.
ಆದರೆ ಮಗ ಮಾತ್ರ ಕೆಲಸಕ್ಕೆ ಹೋಗದೆ ತಂದೆಯೊಂದಿಗೆ ಜಗಳವಾಡುತ್ತಿದ್ದನು. ಎಂದಿನಂತೆ ಬುಧವಾರ ಸಂಜೆ ಕೂಡ ಕೆಲಸಕ್ಕೆ ಹೋಗು ಎಂದಾಗ ಉದಯ್ ತಂದೆಯೊಂದಿಗೆ ಜಗಳವಾಡಿದ್ದಾನೆ. ಗಲಾಟೆ, ಮಾತು ಜೋರಾಗುತ್ತಿದ್ದಂತೆ ಕೋಪಗೊಂಡ ಮಗ ಮನೆಯೊಳಗಿಂದ ಕತ್ತಿ ತಂದು ಮನೆಯ ಅಂಗಳದಲ್ಲೇ ತಂದೆಯ ಕತ್ತನ್ನು ಕಡಿದಿದ್ದಾನೆ. ತೀವ್ರ ರಕ್ತಸ್ರಾವ ಆಗಿ ತಂದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದ ಬಳಿಕ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಮಗನನ್ನು ಬಂಧಿಸಿದ್ದಾರೆ. ಸದ್ಯ ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.