ಮಂಡ್ಯ: ಮಾನ ಮರ್ಯಾದೆ ಇಲ್ವ ನಿಮಗೆ? ನಿಮ್ಮ ಹುದ್ದೆಗಾದರೂ ಗೌರವ ಬೇಡವೇ? ಕಾಲೇಜಿನಲ್ಲಿ ರಾಜಕೀಯ ಮಾಡುತ್ತಿದ್ದೀರಾ? ಎಂದು ರಿಸಲ್ಟ್ ಕಡಿಮೆ ಬಂದ ಶಾಲಾ, ಕಾಲೇಜು ಪ್ರಿನ್ಸಿಪಾಲರ ವಿರುದ್ಧ ಶಾಸಕ ಸುರೇಶ್ಗೌಡ ಆಕ್ರೋಶಗೊಂಡಿದ್ದಾರೆ.
ಮಂಡ್ಯ ಜಿಲ್ಲೆ, ನಾಗಮಂಗಲದ ಪ್ರವಾಸಿ ಮಂದಿರದಲ್ಲಿ ಶೈಕ್ಷಣಿಕ ಉನ್ನತಿ ಕುರಿತು ನಡೆಯುತ್ತಿದ್ದ ಸಭೆಯಲ್ಲಿ ಸುರೇಶ್ಗೌಡ ಭಾಗಿಯಾಗಿದ್ದರು. ಈ ಸಭೆಯಲ್ಲಿ ತಾಲೂಕಿನ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಕೂಡ ಭಾಗಿಯಾಗಿದ್ದರು. ಈ ಸಭೆಯಲ್ಲಿ ರಿಸಲ್ಟ್ ಕಡಿಮೆಯಿದ್ದ ಶಾಲಾ ಕಾಲೇಜು ವಿರುದ್ಧ ಶಾಸಕರು ಆಕ್ರೋಶ ಹೊರಹಾಕಿದ್ದಾರೆ.
ಈ ವೇಳೆ ಇಬ್ಬರು ಪ್ರಾಂಶುಪಾಲರು ರಿಸಲ್ಟ್ ಕಡಿಮೆಯಾಗಲು ಕಾರಣ ತಿಳಿಸಲು ಬಂದಿದ್ದಾರೆ. ಇದರಿಂದ ಮತ್ತಷ್ಟು ಕೆರಳಿದ ಶಾಸಕರು ಬರೀ ಕಾರಣ ಹೇಳಬೇಡಿ. ಶಿಕ್ಷಕರು, ಪ್ರಿನ್ಸಿಪಾಲರು ನಿಮ್ಮ ಘನತೆ ಗೌರವ ಉಳಿಸಿಕೊಳ್ಳಬೇಕು. ಕೆಲವು ಕಡೆ ವಿದ್ಯಾರ್ಥಿಗಳು ಬಂದು ಸರಿಯಾಗಿ ಪಾಠ ಮಾಡುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ನಿಮ್ಮಿಂದ ನೂರಾರು ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಅವರ ಭವಿಷ್ಯ ಏನಾಗಬೇಕು ಎಂದು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.
ಸಮಸ್ಯೆ ಹೇಳುವವರು ಈಗ ಸಭೆ ಕರೆದಾಗ ಬಂದು ಹೇಳೋದಲ್ಲ. ನಾವು ಕ್ಷೇತ್ರದಲ್ಲೇ ಇರುತ್ತೇವೆ ಸಮಸ್ಯೆ ಬಂದ ತಕ್ಷಣ ಹೇಳಬೇಕು. ಇದೂವರೆಗೂ ನಿಮ್ಮ ಸಮಸ್ಯೆ ಹೇಳಿಲ್ಲ. ರಿಸಲ್ಟ್ ಬಗ್ಗೆ ಕೇಳಲು ಬಂದಾಗ ಸಮಸ್ಯೆ ಹೇಳುತ್ತೀರ ಎಂದು ಶಾಸಕ ಸುರೇಶ್ಗೌಡ ಆಕ್ರೋಶ ಹೊರ ಹಾಕಿದರು.