ಮುಂಬೈ: ಗೋಮಾಂಸ ಕಳ್ಳಸಾಗಣೆ (Beef Smuggling) ಮಾಡುತ್ತಿದ್ದಾನೆ ಎಂದು ಶಂಕಿಸಿ ಗೋರಕ್ಷಕರ ಗುಂಪೊಂದು ಶನಿವಾರ ರಾತ್ರಿ ವ್ಯಕ್ತಿಯೊಬ್ಬನನ್ನು ಥಳಿಸಿ ಕೊಂದಿರುವ ಘಟನೆ ಮಹಾರಾಷ್ಟ್ರದ (Maharashtra) ನಾಸಿಕ್ನಲ್ಲಿ (Nashik) ನಡೆದಿದೆ.
ಮುಂಬೈನ ಕುರ್ಲಾದ ಅಫಾನ್ ಅನ್ಸಾರಿ (32) ಕೊಲೆಯಾದ ವ್ಯಕ್ತಿ. ಅನ್ಸಾರಿ ತನ್ನ ಸಹಾಯಕ ನಾಸಿರ್ ಶೇಖ್ ಜೊತೆ ಕಾರಿನಲ್ಲಿ ಮಾಂಸವನ್ನು ಸಾಗಿಸುತ್ತಿದ್ದಾಗ ಗೋರಕ್ಷಕರು ಅವರನ್ನು ಅಡ್ಡಗಟ್ಟಿ ಥಳಿಸಿದ್ದಾರೆ. ಬಳಿಕ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅನ್ಸಾರಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿಗಳ ಪ್ರಕಾರ ಕಾರಿನಲ್ಲಿ ಗೋಮಾಂಸ ಪತ್ತೆಯಾದ ಬಳಿಕ 10-15 ಜನ ಅಪರಿಚಿತ ವ್ಯಕ್ತಿಗಳು ಕಬ್ಬಿಣದ ರಾಡ್ ಹಾಗೂ ದೊಣ್ಣೆಗಳಿಂದ ಇಬ್ಬರ ಮೇಲೆ ಗಂಭೀರ ದಾಳಿ ಮಾಡಿದ್ದಾರೆ. ಇದರಿಂದ ಅನ್ಸಾರಿ ಸಾವನ್ನಪ್ಪಿದ್ದು, ಆತನ ಸಹಾಯಕ ಗಂಭೀರ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, 11 ಜನರನ್ನು ಈಗಾಗಲೇ ಬಂಧಿಸಿದ್ದಾರೆ. ಇದನ್ನೂ ಓದಿ: ಬಸ್ ನಿಲ್ಲಿಸದ್ದಕ್ಕೆ ಕಲ್ಲು ಎಸೆದು ಶಕ್ತಿ ಪ್ರದರ್ಶಿಸಿದ ಮಹಿಳೆ – 5 ಸಾವಿರ ದಂಡ ಕಟ್ಟಿ ಅದೇ ಬಸ್ನಲ್ಲಿ ಪ್ರಯಾಣ
ಮಾರ್ಚ್ನಲ್ಲಿಯೂ ಇದೇ ರೀತಿಯ ಘಟನೆ ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದಿತ್ತು. ಗೋಮಾಂಸ ಸಾಗಿಸುತ್ತಿದ್ದಾನೆ ಎಂಬ ಶಂಕೆಯ ಮೇಲೆ ನಸೀಮ್ ಖುರೇಷಿ ಎಂದು ಗುರುತಿಸಲಾದ (56) ವ್ಯಕ್ತಿಯನ್ನು ಹತ್ಯೆ ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಸರಪಂಚ್ ಸುಶೀಲ್ ಸಿಂಗ್, ಗ್ರಾಮಸ್ಥರಾದ ರವಿ ಸಾಹ್ ಹಾಗೂ ಉಜ್ವಲ್ ಶರ್ಮಾರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಒಡಿಶಾದಲ್ಲಿ ಮತ್ತೊಂದು ಭೀಕರ ಅಪಘಾತ – ಮದುವೆ ಮುಗಿಸಿ ಮನೆಗೆ ತೆರಳುತ್ತಿದ್ದ 12 ಮಂದಿ ಮಸಣಕ್ಕೆ